ರಾಮನಗರ: ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಶವಸಂಸ್ಕಾರ ಮಾಡುವ ವೇಳೆಯಲ್ಲಿ ಹೆಜ್ಜೇನು ದಾಳಿಯಿಂದಾಗಿ ಹದಿನೈದಕ್ಕೂ ಹೆಚ್ಚು ಮಂದಿ ಗಾಯಗೊಂಡರು.
ಅಂಕನಹಳ್ಳಿ ಗ್ರಾಮದ ಡೈರಿ ಶಿವಲಿಂಗಯ್ಯ (70) ಎಂಬುವರು ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದರು. ಮಧ್ಯಾಹ್ನ 2 ಗಂಟೆ ವೇಳೆಗೆ ಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆಗೆ ಏರ್ಪಾಡು ಮಾಡಲಾಗಿತ್ತು. ಶವ ಹೊತ್ತು ಮೆರವಣಿಗೆ ಮೂಲಕ ಜನರು ತೋಟದ ಬಳಿ ಬಂದಾಗ ಹೆಜ್ಜೇನುಗಳು ದಾಳಿ ನಡೆಸಿದವು.
ಘಟನೆಯಲ್ಲಿ ಲತಾ, ಪುಟ್ಟಸ್ವಾಮಣ್ಣ, ಸತೀಶ್, ಅಂಕೇಗೌಡ, ಪ್ರಭು, ಚನ್ನಂಕೇಗೌಡ, ಪಾಂಡು, ಜಯಲಿಂಗಯ್ಯ, ಅಂಕೂಗೌಡ ಮೊದಲಾದವರು ಗಾಯಗೊಂಡರು. ಇವರಲ್ಲಿ ಐದಾರು ಜನರಿಗೆ ತೀವ್ರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಮಧ್ಯಾಹ್ನ 4 ಗಂಟೆ ಸುಮಾರಿಗೆ ಗ್ರಾಮಸ್ಥರು ತೆಂಗಿನ ಗರಿಗಳಿಗೆ ಬೆಂಕಿ ಹಚ್ಚಿಕೊಂಡು ತೋಟಕ್ಕೆ ತೆರಳಿ ಶವ ಸಂಸ್ಕಾರ ನಡೆಸಿದರು.