ರಾಮನಗರ: ಇಲ್ಲಿನ ಜಾನಪದ ಲೋಕದಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ ಸನ್ಯಾಸಿಪುರ ಗ್ರಾಮದ ಕುಮಾರನಾಯಕ ಮತ್ತು ತಂಡದವರು ಭಾನುವಾರ ಬೀಸು ಕಂಸಾಳೆ ಹಾಗೂ ಮರಗಾಲು ಕುಣಿತವನ್ನು ಪ್ರದರ್ಶಿಸಿದರು. ಒಬ್ಬರ ಮೇಲೊಬ್ಬರು ಹತ್ತಿ ವಿವಿಧ ವಿನ್ಯಾಸಗಳಲ್ಲಿ ಪ್ರದರ್ಶಿಸಿದ ಬೀಸು ಕಂಸಾಳೆ ನೃತ್ಯವನ್ನು ಪ್ರವಾಸಿಗರು ಬಿಟ್ಟ ಕಣ್ಣು ಬಿಟ್ಟಂತೆ ನೋಡಿದರು.
18 ವರ್ಷಗಳಿಂದ ಮರಗಾಲು ಹಾಗೂ ಬೀಸು ಕಂಸಾಳೆ ನೃತ್ಯವನ್ನು ಪ್ರದರ್ಶಿಸುತ್ತಿದ್ದೇನೆ. ಈಗಲೂ ಪ್ರದರ್ಶನಕ್ಕೆ ಬೇಡಿಕೆ ಇದ್ದು, ತಿಂಗಳಿಗೆ ನಾಲ್ಕೈದು ಕಾರ್ಯಕ್ರಮಗಳು ಸಿಗುತ್ತವೆ. ನಮ್ಮ ಕುಟುಂಬದವರು ವಂಶಪಾರಂಪರ್ಯವಾಗಿ ಬೀಸುಕಂಸಾಳೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಕಲಾವಿದ ಕುಮಾರನಾಯಕ ತಿಳಿಸಿದರು. ಮರಗಾಲು ನೃತ್ಯವನ್ನು ಕಲಿಸಿಕೊಡಲು ಸಿದ್ಧರಿದ್ದೇವೆ, ಕಲಿಯಲು ಆಸಕ್ತಿ ಹಾಗೂ ನಿರಂತರತೆ ಇರಬೇಕು. ಆಗ ಮಾತ್ರ ಕಲೆಗಳ ಪ್ರದರ್ಶನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಅವರು ಹೇಳಿದರು.
ಕಲಾವಿದರಾದ ಪಿ. ದೇವಣ್ಣ ಕಳಲೆ, ಪವನ್ ಕುಮಾರ್, ಸಿದ್ದರಾಜು ರಾಮು, ಪ್ರತಾಪ್, ಕಿರಣ್ ಕುಮಾರ್, ಸುರೇಶ್, ಮಹದೇವ್, ನಾಗೇಶ್ ಇದ್ದರು.