ಚನ್ನಪಟ್ಟಣ: ‘ಶೈಕ್ಷಣಿಕ ಪ್ರಗತಿಗಾಗಿ ಸಂಘ ಸಂಸ್ಥೆಗಳು ಮತ್ತು ದಾನಿಗಳು ನೀಡುವ ಸೌಲಭ್ಯವನ್ನು ಮಕ್ಕಳು ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಿ ಸಮಾಜಮುಖಿಗಳಾಗಿ ಬೆಳೆಯಬೇಕು’ ಎಂದು ಸಮಾಜ ಸೇವಕ ಕೂರಣಗೆರೆ ಕೃಷ್ಣಪ್ಪ ಕರೆ ನೀಡಿದರು.
ತಾಲ್ಲೂಕಿನ ಬೆಳಕೆರೆ ಗ್ರಾಮದ ವಿಶ್ವಮಾನವ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ದಾನಿಗಳ ಸಹಾಯದಿಂದ ನಿರ್ಮಿಸಿಕೊಟ್ಟಿದ್ದ ಶಾಲಾ ಕಾಂಪೌಂಡ್, ಗೇಟ್ ಉದ್ಘಾಟನೆ ಮತ್ತು ಉಚಿತ ಬೈಸಿಕಲ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳು ಯಾವುದೇ ದುಶ್ಚಟಗಳಿಗೆ ಒಳಗಾಗದೇ ತಂದೆ ತಾಯಿಗಳ ಆಶಯದಂತೆ ಚೆನ್ನಾಗಿ ಓದಿ, ವಿದ್ಯಾರ್ಥಿ ದಿಸೆಯಲ್ಲಿಯೆ ಸಂಸ್ಕಾರ, ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಓದಿದ ಶಾಲೆ ಮತ್ತು ಗ್ರಾಮದ ಅಭಿವೃದ್ಧಿಗೆ ಮುಂದಾಗುವುದರ ಜತೆಗೆ ವಯಸ್ಸಾದ ತಂದೆ ತಾಯಿಗಳನ್ನು ಗೌರವಿಸಿ ಪ್ರೀತಿ ವಿಶ್ವಾಸದಿಂದ ಕಾಣುತ್ತಾ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು’ ಎಂದರು.
ಹಿರಿಯ ರಂಗಭೂಮಿ ಕಲಾವಿದ ಕೆಂಪೇಗೌಡ ಮಾತನಾಡಿ, ‘ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮತ್ತು ಶಾಲಾ ಅಭಿವೃದ್ಧಿಗಾಗಿ ನಿಸ್ವಾರ್ಥದಿಂದ ಸಹಾಯ ಮಾಡಿದ ದಾನಿಗಳನ್ನು ನೆನೆಯುವುದು ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಿ ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡಲು ಮುಂದಾಗಬೇಕು’ ಎಂದುಸಲಹೆ ನಿಡಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಅಧ್ಯಾಪಕ ಟಿ.ಎಂ.ನಾಮದೇವ ಮಾತನಾಡಿ, ‘ಸಂಸ್ಥೆ ವತಿಯಿಂದ ನೀಡುತ್ತಿರುವ ಸೈಕಲ್ಗಳನ್ನು ಶಾಲೆಗೆ ಸಕಾಲಕ್ಕೆ ಬರಲು ಬಳಸಿಕೊಳ್ಳಬೇಕು. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಹುಟ್ಟು ಸಾವಿನ ನಡುವೆ ಶಾಶ್ವತವಾಗಿ ಉಳಿಯುವ ಕೆಲಸವನ್ನು ಮಾಡಿ ಸಮಾಜದ ಋಣವನ್ನು ತೀರಿಸಬೇಕು ಎಂದು ಹೇಳಿದರು.
ಸಮಾಜ ಸೇವಕ ಕೂರಣಗೆರೆ ಕೃಷ್ಣಪ್ಪ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. 8ನೇ ತರಗತಿ ಮಕ್ಕಳಿಗೆ ಉಚಿತ ಬೈಸಿಕಲ್ಗಳನ್ನು ವಿತರಿಸಲಾಯಿತು.
ಶಾಲಾ ಮುಖ್ಯಶಿಕ್ಷಕ ನಾಥೇಗೌಡ ಸ್ವಾಗತಿಸಿದರು. ಶಿಕ್ಷಕಕರುಗಳಾದ ಲಿಂಗರಾಜು, ಬಿ.ಎಂ.ಶಿವಮಲ್ಲೇಶ್, ಸಿದ್ದಪ್ಪಾಜಿ, ಸಿದ್ದರಾಜು, ಮಂಜುಳ, ಮಹೇಶ್, ಸಮಾಜ ಸೇವಕ ಕೆ.ಜಿ.ರಾಜು ಇದ್ದರು.