ರಾಮನಗರ: ಹೆಲ್ಮೆಟ್ ಜಾಗೃತಿಗಾಗಿ ಐಜೂರು ಪೊಲೀಸ್ ಸ್ಟೇಷನ್ ಸಿಬ್ಬಂದಿ ಭಾನುವಾರ ನಗರದಲ್ಲಿ ಬೈಕ್ ಸಂಚಾರ ನಡೆಸಿದರು.
ಸ್ಟೇಷನ್ ನಿಂದ ಆರಂಭವಾದ ಜಾಗೃತಿ ಸಂಚಾರ ನಗರದ ವಿವೇಕಾನಂದನಗರ, ರಾಯರದೊಡ್ಡಿ ವೃತ್ತ, ಐಜೂರು, ಕೆಂಪೇಗೌಡ ವೃತ್ತ ಸೇರಿದಂತೆ ಇತರೆ ಕಡೆ ಸಂಚರಿಸಿತು. ಹೆಲ್ಮೆಟ್ ಕಡ್ಡಾಯವಾಗಿರುವ ಕಾರಣ ಈ ಕುರಿತು ನಾಗರಿಕರಿಗೆ ಮನವರಿಕೆ ಮಾಡಿಕೊಡುವುದು ಸಂಚಾರದ ಉದ್ದೇಶವಾಗಿತ್ತು.
ಪೂರ್ತಿ ದಿನ ಬೈಕ್ ನಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇವೆ. ಜತೆಗೆ ದಂಡ ವಿಧಿಸುವ ಮೊದಲು ಪ್ರಥಮ ಹಂತವಾಗಿ ಇದನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಸಹ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಐಜೂರು ಪೊಲೀಸ್ ಸ್ಟೇಷನ್ ಎಎಸ್ಐ ಕೇಶವ್ ಮೂರ್ತಿ ತಿಳಿಸಿದರು.
ಹೆಲ್ಮೆಟ್ ರಹಿತ ಮೊದಲೆರಡು ಪ್ರಕರಣಗಳಿಗೆ ದಂಡ ವಿಸಲಾಗುತ್ತದೆ. ಮೂರನೇ ಬಾರಿಯೂ ಇದೇ ರೀತಿ ಮುಂದುವರೆದರೆ ಚಾಲನಾ ಪರವಾನಗಿ (ಡಿಎಲ್) ರದ್ದು ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಈ ಕುರಿತು ಜನತೆಯಲ್ಲಿ ಇನ್ನು ಅರಿವು ಮೂಡಿಲ್ಲ. ಹಾಗಾಗಿ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.
ಐಜೂರು ಪೊಲೀಸ್ ಸ್ಟೇಷನ್ ಎಎಸ್ಐ ಲಿಂಗರಾಜು, ಸಿಬ್ಬಂದಿ ಪ್ರದೀಪ್, ವಿನೋದ್, ಶ್ರುತಿ ಇದ್ದರು.