ರಾಮನಗರ: ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ 112ನೇ ಜಯಂತಿಯನ್ನು ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಆಚರಿಸಲಾಯಿತು.
ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಿಹಿ ವಿತರಿಸಲಾಯಿತು. ಈ ಸಂದರ್ಭ ಪಕ್ಷದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಅಶ್ವತ್ಥ್ ನಾರಾಯಣ ಮಾತನಾಡಿ ‘ ಶ್ರೀಗಳು ತ್ರಿವಿಧ ದಾಸೋಹಿಯಾಗಿ ಬಡ ವಿದ್ಯಾರ್ಥಿಗಳಿಗೆ ವಿದ್ಯೆ, ಅನ್ನ ಹಾಗೂ ಜ್ಞಾನ ನೀಡುವ ಮೂಲಕ ಸಮಾಜದಲ್ಲಿ ಹೆಸರು ಗಳಿಸಿದ್ದರು’ ಎಂದು ಸ್ಮರಿಸಿದರು.
‘ಸಿದ್ಧಗಂಗಾ ಮಠದಲ್ಲಿ ಓದಿದ ಸಾಕಷ್ಟು ಮಂದಿ ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅವರಿಗೆಲ್ಲ ಶಿವಕುಮಾರ ಶ್ರೀಗಳ ಬದುಕೇ ಮಾದರಿಯಾಗಿದೆ’ ಎಂದು ಬಣ್ಣಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್, ಉಪಾಧ್ಯಕ್ಷ ಎಸ್.ಆರ್. ನಾಗರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ ಗೌಡ, ಮುಖಂಡರಾದ ರಮೇಶ್, ಚಂದ್ರಶೇಖರ ರೆಡ್ಡಿ, ಬಿ. ನಾಗೇಶ್, ಪದ್ಮನಾಭ, ಶಿವಲಿಂಗಯ್ಯ, ಮಂಜು, ಕೃಷ್ಣ ಇದ್ದರು.
ವಿವಿಧೆಡೆ ಪ್ರಚಾರ ಬಿಜೆಪಿ ಅಭ್ಯರ್ಥಿ ಅಶ್ವತ್ಥ್ ನಾರಾಯಣ ಕಾರ್ಯಕರ್ತರ ಜೊತೆಗೂಡಿ ನಗರದ ವಿವಿಧೆಡೆ ಸೋಮವಾರ ಮತಯಾಚನೆ ಮಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು, ಗ್ರಾಹಕರು ಭೇಟಿ ಮಾಡಿ ಮತಯಾಚನೆ ಆರಂಭಿಸಿದ ಅವರು ಬಳಿಕ ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ನಡೆಸಿದರು.