ಮಾಗಡಿ: ‘ಹಾಲು ಹಾಕುವವರನ್ನು ಸಹಕಾರ ಸಂಘದ ಷೇರುದಾರರನ್ನಾಗಿಸಲಾಗುವುದು. ಅವರಿಗೆ ಬೋನಸ್ ನೀಡಲಾಗುತ್ತದೆ’ ಎಂದು ಎಂಪಿಸಿಎಸ್ ಉಪಾಧ್ಯಕ್ಷ ಚಿತ್ತಯ್ಯ ತಿಳಿಸಿದರು.
ತಟವಾಳ್ ಹಾಲು ಉತ್ಪಾಕದರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
‘ಕೊರೊನಾ ಕಾಲದಲ್ಲಿ ಎಲ್ಲಾ ವ್ಯವಹಾರಗಳು ಕುಸಿತ ಕಂಡಿವೆ. ಬೆಂಗಳೂರು ಹಾಲು ಒಕ್ಕೂಟ ಮಾತ್ರ ಹಾಲು ಉತ್ಪಾದಕರ ನೆರವಿಗೆ ಮುಂದಾಗಿದೆ. ಕೊರೊನಾ ಎಚ್ಚರಿಕೆಯನ್ನು ಪಾಲಿಸುವುದರ ಜೊತೆಗೆ ಗುಣಮಟ್ಟದ ಹಾಲು ಉತ್ಪಾದಿಸೋಣ. ಹಾಲು ಉತ್ಪಾದಕರ ಸಹಕಾರ ಸಂಘ ರೈತಾಪಿ ವರ್ಗದವರ ಪಾಲಿಗೆ ಕಾಮಧೇನುವಿದ್ದಂತೆ’ ಎಂದರು.
ಮುಖ್ಯ ಕಾರ್ಯನಿರ್ವಾಹಕ ಗಂಗಾಧರ್ ಮಾತನಾಡಿ, 6 ತಿಂಗಳಿಂದ ಡೇರಿಗೆ ಹಾಲು ಹಾಕುವವರನ್ನು ಷೇರುದಾರರನ್ನಾಗಿಸಲಾಗುವುದು. ಅವರು ಅರ್ಜಿ ಕೊಡಬೇಕು. ಪ್ರತಿ ತಿಂಗಳು 5ನೆ ತಾರೀಕಿನ ಒಳಗೆ ಹಾಲು ಹಾಕಿದವರಿಗೆ ಹಣ ನೀಡಲಾಗುತ್ತಿದೆ. ಸಂಘದ ವ್ಯಾಪಾರ ಲಾಭ ₹6.5 ಲಕ್ಷ ಬಂದಿದೆ. ನಿವ್ವಳ ಲಾಭ ₹3.74 ಲಕ್ಷ ಬೋನಸ್ ರೂಪದಲ್ಲಿ ವಿತರಿಸುತ್ತೇವೆ’ ಎಂದರು.
ಮಾಗಡಿ ಶಿಬಿರದ ವಿಸ್ತರಣಾಧಿಕಾರಿ ರವೀಂದ್ರ ಮಾತನಾಡಿ, ‘ಆಡಳಿತ ನಡೆಸುವವರಿಗೆ ಕೇಳುವವರು ಇರಬೇಕು. ಪ್ರತಿಯೊಂದು ಸಭೆಯಲ್ಲಿ ಷೇರುದಾರರು ಭಾಗವಹಿಸಿ ಪ್ರಶ್ನಿಸಬೇಕು. ನಂದಿನಿ ಎಂದರೆ ನಂಬಿಕೆ ಎಂದು ತಿಳಿದು ಗುಣಮಟ್ಟದ ಹಾಲು ಉತ್ಪಾದಿಸಬೇಕು’ ಎಂದರು.
ಸಂಘದ ನಿರ್ದೇಶಕರಾದ ಯಶೋಧಮ್ಮ, ಭಾಗ್ಯಶ್ರೀ, ನಾಗರತ್ನ, ಲಕ್ಷ್ಮಮ್ಮ, ಸಿದ್ದರಾಜು, ವೆಂಕಟೇಶಪ್ಪ, ಚಂದ್ರಶೇಖರ್, ಚಿಕ್ಕಣ್ಣ, ಲಿಂಗರಾಜು ಗ್ರಾಮದ ಮುಖಂಡರಾದ ಶಾಂತಮ್ಮವೀರಣ್ಣ, ವಸಂತ, ಅಣ್ಣಪ್ಪ, ಅಂಗನವಾಡಿ ಕಾರ್ಯಕರ್ತೆ ಲಲಿತ, ಹಾಲು ಪರೀಕ್ಷಕಿ ಪುಷ್ಪಲತಾ ಹಾಗೂ ಗ್ರಾಮಸ್ಥರು ಇದ್ದರು.