ಸಾತನೂರು (ಕನಕಪುರ): ಮೀಸಲು ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಬೇಟೆಯಾಡಿ ಸಾಗಾಣಿಕೆ ಮಾಡುತ್ತಿದ್ದಾಗ ಆರೋಪಿಗಳನ್ನು ಅರಣ್ಯಾಧಿಕಾರಿಗಳು ತಾಲ್ಲೂಕಿನ ಹರಿಹರ ಬಳಿಯ ಕಾಳಚೆನ್ನಯ್ಯನಕೆರೆಯ ಸಮೀಪದಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಸಾತನೂರು ಹೋಬಳಿ ಕುರಿಮಂದೆದೊಡ್ಡಿ ಗ್ರಾಮದ ನಾರಾಯಣ (51) ಬಿನ್ ಕೊಂಡಯ್ಯ, ಪುಟ್ಟಸ್ವಾಮಿ (48) ಬಿನ್ ಚಿಕ್ಕಮೊಗಯ್ಯ, ವೆಂಕಟರಾಮು (45) ಬಿನ್ ಹೊನ್ನಯ್ಯ ಎಂದು ಗುರುತಿಸಲಾಗಿದೆ.
ಕಾವೇರಿ ಅಭಯಾರಣ್ಯದ ಬಸವನಬೆಟ್ಟ ಮೀಸಲು ಅರಣ್ಯದ ಸಂಗಮ ವನ್ಯಜೀವಿ ವಲಯದ ಹರಿಹರ ಗಸ್ತಿನಲ್ಲಿ ಹೆಣ್ಣು ಕಡವೆಯನ್ನು ಬೇಟೆಯಾಡಿ ಅದನ್ನು ಸಾಗಾಣಿಕೆ ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಲಯ ಅರಣ್ಯಾಧಿಕಾರಿ ಕಿರಣ್ಕುಮಾರ್ ಜಿ. ಕರತಂಗಿ, ಉಪ ವಲಯ ಅರಣ್ಯಾಧಿಕಾರಿ ಅನಿಲ್ಕುಮಾರ್.ಸಿ, ಅರಣ್ಯ ರಕ್ಷಕ ಶರಣಪ್ಪ, ಸಿಬ್ಬಂದಿ ರವಿ, ಕಾರ್ತಿಕ್ ರವಿನಾಯ್ಕ್, ಸುದೀಪ್, ದೇವರಾಜು ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.