ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕೃಷಿ ಆದಾಯವನ್ನು ಕೇಂದ್ರೀಕರಿಸಿ ಸಿಬಿಐ ಅಧಿಕಾರಿಗಳು ಶೋಧ ಕೈಗೊಂಡಿದ್ದಾರೆ.
ಬುಧವಾರ ಎಂಟು ಅಧಿಕಾರಿಗಳ ತಂಡವು ಕನಕಪುರ ತಾಲ್ಲೂಕಿನ ವಿವಿಧೆಡೆ ಇರುವ ಡಿಕೆಶಿ ನಿವಾಸ, ಕಚೇರಿಗಳಲ್ಲಿ ಪರಿಶೀಲನೆ ನಡೆಸಿದೆ. ಮುಖ್ಯವಾಗಿ ಅವರು ಹಾಗೂ ಅವರ ಕುಟುಂಬಸ್ಥರು, ಸಂಬಂಧಿಕರ ಹೆಸರಿನಲ್ಲಿ ಇರುವ ಜಮೀನುಗಳ ದಾಖಲೆಗಳು, ಅದರಿಂದ ಬರುವ ಆದಾಯದ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ಕನಕಪುರ ತಹಶೀಲ್ದಾರ್ ಹಾಗೂ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳನ್ನು ಜಮೀನುಗಳಿಗೆ ಕರೆದೊಯ್ದಿರುವ ತಂಡವು ಯಾವ ಜಮೀನು ಯಾರ ಹೆಸರಿನಲ್ಲಿ ಇದೆ. ಸದ್ಯ ಯಾರು ಅದರ ಅನುಭೋಗದಲ್ಲಿ ಇದ್ದಾರೆ ಎಂಬೆಲ್ಲ ಮಾಹಿತಿ ಕಲೆಹಾಕಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಕುಟುಂಬವು ₹840 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಣೆ ಮಾಡಿಕೊಂಡಿತ್ತು. ಅದರಲ್ಲೂ ಕೃಷಿ ಆದಾಯದ ಹೆಚ್ಚಳ ತೋರಿಸಿತ್ತು. ಸದ್ಯ ಅದರ ಪರಿಶೀಲನೆ ಆರಂಭ ಆಗಿರುವುದು ಕುತುಹೂಲ ಮೂಡಿಸಿದೆ.