ಚನ್ನಪಟ್ಟಣ: ಎಳ್ಳಾಮವಾಸ್ಯೆ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಟ್ಟಣದ ಕೋಟೆ ಮಾರಮ್ಮ ದೇವಿಗೆ ಗುರುವಾರ ಮೊರ ಮತ್ತು ಬಳೆಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ಪೂಜಿಸಲಾಯಿತು.
ಬೆಳಿಗ್ಗೆಯಿಂದಲೇ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಪ್ರತಿವರ್ಷ ಸಂಕ್ರಾಂತಿಯ ಹಿಂದಿನ ದಿನ ಹಾಗೂ ಸಂಕ್ರಾಂತಿ ದಿನ ಇಂತಹ ವಿಶೇಷ ಪೂಜೆ ನಡೆಸುವುದು ಇಲ್ಲಿನ ವಾಡಿಕೆ.
ಹಿಂದೆ ತರಕಾರಿಗಳಿಂದ, ಹಣ್ಣುಗಳಿಂದ, ಬಾಳೆ ಎಲೆಗಳಿಂದ, ಬಳೆಗಳಿಂದ, ವೀಳ್ಯದೆಲೆ, ಅರಿಸಿನ ಕುಂಕುಮ, ಬೆಣ್ಣೆ, ನಿಂಬೆಹಣ್ಣು, ನವಧಾನ್ಯದಿಂದ ವಿಶೇಷವಾಗಿ ಅಲಂಕಾರ ಮಾಡಲಾಗುತ್ತಿತ್ತು. ಈ ವರ್ಷ ಮೊರ ಮತ್ತು ಬಳೆಗಳಿಂದ ಅಲಂಕಾರ ಮಾಡಲಾಗಿದೆ ಎಂದು ಅರ್ಚಕ ಆರ್.ಕೆ. ಮಲವೇಗೌಡ ತಿಳಿಸಿದರು.