ಚನ್ನಪಟ್ಟಣ: ಆಧುನಿಕ ಕಾಲದಲ್ಲಿ ಯುವ ತಲೆಮಾರು ಪಾಶ್ಚಿಮಾತ್ಯ ಸಂಸ್ಕೃತಿಯ ಆಕರ್ಷಣೆಗೆ ಒಳಗಾಗುತ್ತಿರುವುದರಿಂದ ನೆಲಮೂಲ ಸಂಸ್ಕೃತಿಯ ಕಲೆಗಳು ಅಳಿವಿನಂಚಿಗೆ ಸಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಭಾಗ್ಯಬಾಯಿ ವಿಷಾದ ವ್ಯಕ್ತಪಡಿಸಿದರು.
ತಾಲ್ಲೂಕಿನ ಲಾಂಬಾಣಿ ತಾಂಡ್ಯದಲ್ಲಿ ಶ್ರೀ ಹುಚ್ಚಮ್ಮ ಜಾನಪದ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಾನಪದ ಕಲೆಗಳಲ್ಲಿನ ಮಾನವೀಯ ಮೌಲ್ಯಗಳ ಕುರಿತ ವಿಚಾರ ಸಂಕಿರಣ ಹಾಗೂ ಜಾನಪದ ಗೀತಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ವರು ಮಾತನಾಡಿದರು.
‘ಹಿರಿಯ ತಲೆಮಾರು ತಮ್ಮ ನೋವು ನಲಿವುಗಳನ್ನು ಹೇಳಿಕೊಳ್ಳುವ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದ ತತ್ವಪದ, ಜಾನಪದ, ಸೋಬಾನೆ ಪದ, ತಮಟೆ ವಾದ್ಯ, ಡೊಳ್ಳುಕುಣಿತ, ವೀರಗಾಸೆ ಹೀಗೆ ಇನ್ನು ಹಲವು ಕಲೆಗಳು ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮದ ಪ್ರಭಾವ ಹಾಗೂ ಪಾಶ್ಚಿಮಾತ್ಯದ ಹೊಡೆತಕ್ಕೆ ಸಿಲುಕಿ ಕಣ್ಮರೆಯಾಗುತ್ತಿವೆ’ ಎಂದರು.
ಗ್ರಾಮದ ಮುಖಂಡ ಮುನಿಯನಾಯ್ಕ ಮಾತನಾಡಿ, ಜಾನಪದ ಕಲೆಗಳನ್ನು ಯುವ ತಲೆಮಾರಿಗೆ ತಲುಪಿಸಲು ಸರ್ಕಾರ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ. ಹಿರಿಯ ಜಾನಪದ ತಜ್ಞರು, ಪರಿಣಿತ ಕಲಾವಿದರಿಂದ ತರಬೇತಿ ನೀಡಲು ಇಂತಹ ಕಾರ್ಯಾಗಾರಗಳನ್ನು ಆಯೋಜಿಸಲು ಸರ್ಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.
ಮುಖಂಡ ಗೋವಿಂದ ನಾಯ್ಕ ಮಾತನಾಡಿ, ಜಾನಪದ ಗೀತೆ, ಕಲಾ ಪ್ರಕಾರಗಳು ಮಾನವೀಯ ಮೌಲ್ಯಗಳ ಆಗರವಾಗಿದ್ದು, ಅವುಗಳಲ್ಲಿರುವ ಸಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜವು ಸುಸ್ಥಿತಿಯಲ್ಲಿರಲು ಸಾಧ್ಯವಾಗುತ್ತದೆ ಎಂದರು.
ಗ್ರಾಮಸ್ಥರಾದ ಕಮಲಾಬಾಯಿ, ಲಚ್ಚ ನಾಯಕ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಚಕ್ಕೆರೆ ಸಿದ್ದರಾಜು, ಕಲಾವಿದರಾದ ಗುರುಸಿದ್ದ, ಶ್ರೀನಿವಾಸ, ರೋಸ್ ಮೇರಿ, ಅರುಣ್, ಮುತ್ತರಾಜ್, ಶಿವಕುಮಾರ್ ಗೀತಗಾಯನ ನಡೆಸಿಕೊಟ್ಟರು.