ಚನ್ನಪಟ್ಟಣ (ರಾಮನಗರ): ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಅವರು ತಮ್ಮ ಮೂರುವರೆ ವರ್ಷದ ಪುತ್ರನನ್ನು ಮಂಗಳವಾರ ನಗರದ ಸರ್ಕಾರಿ ಅಂಗನವಾಡಿಗೆ ದಾಖಲು ಮಾಡಿದ್ದಾರೆ.
ನಗರದ ಕೋಟೆ ಆಂಜನೇಯ ದೇವಾಲಯ ಬಳಿ ಇರುವ ಅಂಗನವಾಡಿ ಕೇಂದ್ರಕ್ಕೆ ಪತ್ನಿಯೊಂದಿಗೆ ಬಂದ ಅವರು, ಪುತ್ರ ಎಚ್.ಎಂ.ನಿದರ್ಶನನ್ನು ಅಂಗನವಾಡಿಗೆ ದಾಖಲಿಸಿದರು.
‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಸರ್ಕಾರವೂ ಹಲವು ಸವಲತ್ತು ಒದಗಿಸುತ್ತಿದೆ. ಕೆಲ ಪೋಷಕರು ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುತ್ತಿದ್ದಾರೆ. ಅಂತವರಿಗೆ ಪ್ರೇರಣೆಯಾಗಲಿ ಎಂದು ಮಗನನ್ನು ಅಂಗನವಾಡಿಗೆ ದಾಖಲು ಮಾಡಿಸಿದ್ದೇನೆ’ ಎಂದು ಹೇಳಿದರು.
‘ನಾನು ಕೂಡ ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದೇನೆ. ನನ್ನ ಮಗನಿಗೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು ಎಂಬ ಮಹದಾಸೆ ಇದೆ’ ಎಂದರು.
‘ಪೋಷಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಭಾವನೆ ಇದೆ. ಸಾಲ ಮಾಡಿಯಾದರೂ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಪೋಷಕರಿಗೆ ನ್ಯಾಯಾಧೀಶರ ನಡೆ ಮಾದರಿ’ ಎಂದು ಸಿಡಿಪಿಒ ಎಂ.ಕೆ.ಸಿದ್ದಲಿಂಗಯ್ಯ ತಿಳಿಸಿದ್ದಾರೆ.