ಕುದೂರು(ಮಾಗಡಿ): ಹಸಿರೇ ಉಸಿರು ಎಂಬುದನ್ನು ಮಕ್ಕಳಿಗೆ ಮನನ ಮಾಡಿಕೊಡಬೇಕು ಎಂದು ಶಿಕ್ಷಣ ಪೌಂಡೇಷನ್ ನ ಶಿಕ್ಷಕಿ ದೇವಕಿ ತಿಳಿಸಿದರು.
ಸುಗ್ಗನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಿಕ್ಷಣ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಮಕ್ಕಳ ದಸರಾ ಶಿಬಿರದಲ್ಲಿ ಅವರು ಮಾತನಾಡಿದರು.
ಪರಿಸರದ ಕೂಸು ಮಾನವ. ಪಶುಪಕ್ಷಿ, ಸಸ್ಯಸಂಕುಲಗಳು ಸಹ ನಮ್ಮ ನೆಂಟರು. ನದಿ, ಕಾಡು, ಬೆಟ್ಟಗುಡ್ಡಗಳು ನಾಗರಿಕತೆಯ ಉಗಮಕ್ಕೆ ಆಧಾರವಾಗಿದ್ದವು. ಕಾಡಿದ್ದರೆ ನಾಡು, ವನಸಂಪತ್ತು ಇಲ್ಲದಿದ್ದರೆ ಮಾನವರ ಬದುಕು ಸುಡುಗಾಡು ಆಗಲಿದೆ. ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಬದಲು ಮಗುವಿನ ಹೆಸರಿನಲ್ಲಿ ಪ್ರತಿಯೊಬ್ಬರು ಸಸಿಗಳನ್ನು ನೆಡಬೇಕು ಎಂದರು.
ಮಕ್ಕಳು ಶಾಲೆಯ ಆವರಣವನ್ನು ಸ್ವಚ್ಚಗೊಳಿಸಿ ಸಸಿಗಳನ್ನು ನೆಟ್ಟು ನೀರೆರೆದರು. ಪುಟಾಣಿಗಳಾದ ದೀಪಿಕಾ, ಹರ್ಷಿತ್, ಭವ್ಯ, ರಜತ್ , ದೀಕ್ಷಿತಾ, ಶ್ರೀನಿವಾಸ, ರೇಖಾ , ಚಿರಂತ್ ಇದ್ದರು.