ರಾಮನಗರ: ರಾಜ್ಯದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ತೊರೆಯದೇ ಹೋದರೆ ಕಾಂಗ್ರೆಸ್ ನಿರ್ನಾಮ ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮಾತಿನುದ್ದಕ್ಕೂ ಮೈತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಹಿಂದೆಂದೂ ಇಂತಹ ಹೀನಾಯ ಸ್ಥಿತಿಗೆ ತಲುಪಿರಲಿಲ್ಲ. ನಮ್ಮ ನಾಯಕರಿಗೆ ಇನ್ನಾದರೂ ಬುದ್ದಿ ಬರಬೇಕಿದೆ ಎಂದರು.
ಮೈತ್ರಿ ಸರ್ಕಾರದಿಂದಾಗಿ ಜೆಡಿಎಸ್ ಆರ್ಥಿಕವಾಗಿ ಸಧೃಡವಾಗಿದೆ. ಇದರಿಂದಾಗಿಯೇ ಅವರು ಈ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ 150 ಕೋಟಿ, ತುಮಕೂರಿನಲ್ಲಿ 80 ಹಾಗೂ ಹಾಸನದಲ್ಲಿ 60 ಕೋಟಿ ಹಣ ಖರ್ಚು ಮಾಡಲು ಸಾಧ್ಯವಾಯಿತು ಎಂದು ಲೇವಡಿ ಮಾಡಿದರು.
‘ನಮ್ಮಲ್ಲಿನ ಕೆಲವರಿಗೆ ಅಧಿಕಾರದ ಕುರ್ಚಿ ಬಿಡಲು ಇಷ್ಟ ಇಲ್ಲ,’ ಎಂದು ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದರು.
‘37 ಸ್ಥಾನ ಹೊಂದಿದವರೇ ಮುಖ್ಯಮಂತ್ರಿ ಆಗಿರುವಾಗ 105 ಸ್ಥಾನ ಪಡೆದವರು ಸರ್ಕಾರ ರಚನೆಗೆ ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ' ಎಂದೂ ಹೇಳಿದರು.
ಸುಮಲತಾಗೆ ಅಭಿನಂದನೆ: ಮಂಡ್ಯದಲ್ಲಿ ಸುಮಲತಾ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಅವರು ‘ಕಾಂಗ್ರೆಸ್ ಕಾರ್ಯಕರ್ತರ ಧೃಡ ನಿರ್ಧಾರದಿಂದಾಗಿ ಈ ಗೆಲುವು ಸಾಧ್ಯವಾಯಿತು' ಎಂದಿದ್ದಾರೆ.