ರಾಮನಗರ: ರಾಜ್ಯದಲ್ಲಿ ಈವರೆಗೆ 75 ಜನರಲ್ಲಿ ಕೊರೊನಾ ಪಾಸಿಟಿವ್ ಆಗಿದ್ದು, ರೋಗ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳ ಸಭೆ ಬಳಿಕ ಅವರು ಪತ್ರಕರ್ತರ ಜತೆ ಮಾತನಾಡಿದರು.
ಕೋವಿಡ್–19 ನಿಯಂತ್ರಣದ ದಿಸೆಯಲ್ಲಿ ಮುಂದಿನ ಎರಡು ವಾರಗಳು ತುಂಬ ನಿರ್ಣಾಯಕ ಆಗಲಿದೆ. ಹೋಮ್ ಕ್ವಾರಂಟೈನ್ನಲ್ಲಿ ಇರುವವರ ಮೇಲೆ ನಿಗಾ ವಹಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಈ ಕಾಯಿಲೆ ತಡೆಗಟ್ಟಲು ಇರುವ ಏಕೈಕ ಉಪಾಯ. ಆದರೆ, ಇದಕ್ಕೆ ಹೆದರುವ ಅಗತ್ಯ ಇಲ್ಲ. ಪಾಸಿಟಿವ್ ಬಂದವರೂ ಗುಣಮುಖರಾಗಿದ್ದಾರೆ. ಕೆಲವು ರೋಗಿಗಳು ವಯಸ್ಸು ಮತ್ತು ಬೇರೆ ತೊಂದರೆಯಿಂದಾಗಿ ಮೃತಪಟ್ಟಿದ್ದಾರೆ.
ಮೈಸೂರಿನಲ್ಲಿ ಮೂರನೇ ವ್ಯಕ್ತಿಗೆ ಸೋಂಕು ತಗುಲಿದ್ದು, ಅವರ ಚಲನವಲನಗಳ ಮಾಹಿತಿ ಪಡೆಯಲಾಗಿದೆ. ಅವರ ಸಂಪರ್ಕಕ್ಕೆ ಬಂದವರ ಮಾಹಿತಿ ಪಡೆಯಲಾಗುವುದು ಎಂದರು.
ದೇಶದೆಲ್ಲೆಡೆ ಮಾಸ್ಕ್ ಹಾಗೂ ವೈದ್ಯಕೀಯ ಉಪಕರಣಗಳ ಕೊರತೆ ಇದೆ. ವೆಂಟಿಲೇಟರ್, ಎನ್–95 ಮಾಸ್ಕ್ಗಳು ಬೇಕಿದೆ. ಚೀನಾ ಮೊದಲಾದ ದೇಶಗಳಿಂದ ವಿಶೇಷ ವಿಮಾನದ ಮೂಲಕ ಭಾರತಕ್ಕೆ ತರುವ ಪ್ರಯತ್ನ ನಡೆದಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.