ಮಾಗಡಿ: ‘ಕೊರೊನಾ ಸೋಂಕಿನಿಂದ ಮುಕ್ತರಾಗಲು ಗ್ರಾಮೀಣ ಜನತೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಉಮಾದೇವಿ ತಿಳಿಸಿದರು.
ಸೋಲೂರಿನ ಸರ್ಕಾರಿ ಸಮುದಾಯ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ನಡೆದ ಲಸಿಕಾ ಮೇಳದಲ್ಲಿ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ರೋಗ ಬರುವುದಕ್ಕೆ ಮುಂಚೆಯೇ ಎಚ್ಚೆತ್ತುಕೊಳ್ಳುವುದು ಬುದ್ಧಿವಂತರ ಲಕ್ಷಣ. ಕೋವಿಡ್ ಎರಡನೇ ಅಲೆಯಲ್ಲಿ ಆದ ಸಾವು, ನೋವು ಮರಳಿ ಯಾರಿಗೂ ಬರಬಾರದು. ಸರ್ಕಾರವೇ ಉಚಿತ ಲಸಿಕೆ ಹಾಕುತ್ತಿರುವಾಗ ಹಳ್ಳಿಗಾಡಿನ ಮಹಿಳೆಯರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.
ತಜ್ಞ ವೈದ್ಯೆ ಡಾ.ಸವಿತಾ ವಿವೇಕಾನಂದ ಮಾತನಾಡಿ, ಕೊರೊನಾ ಸೋಂಕಿನ ಭಯಾನಕತೆಯನ್ನು ಅನುಭವಿಸಿದ್ದೇನೆ. ರಾಜ್ಯದಲ್ಲಿ ಸಹಸ್ರಾರು ಜೀವಗಳನ್ನು ಕಳೆದುಕೊಂಡಿದ್ದೇವೆ. ಸಮಸ್ಯೆ ಎದುರಾಗುವ ಮುನ್ನವೇ ಲಸಿಕೆ ಪಡೆದು ಜಾಗೃತರಾಗೋಣ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೈರವೇಗೌಡ ಮಾತನಾಡಿ, ಕಾಡುಗೊಲ್ಲರ ಹಟ್ಟಿ, ಪರಿಶಿಷ್ಟ, ಭೋವಿ ಕಾಲೊನಿಗಳ ನಿವಾಸಿಗಳು ಲಸಿಕೆ ಪಡೆಯಲು ಮುಂದೆ ಬರಬೇಕು ಎಂದು ಹೇಳಿದರು.
ಮಕ್ಕಳ ತಜ್ಞೆ ಡಾ.ಜಯಂತಿ, ಡಾ.ರೂಪ ಚಂದ್ರಮಾಲಾ, ಛಾಯಾ, ಶಂಕರಮ್ಮ ಹಾಜರಿದ್ದರು.