ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ–ಶಾ ಕಾರ್ಖಾನೆಯ ಹತ್ತು ಮಹಾ ಸುಳ್ಳುಗಳು’ ಮಾಹಿತಿ ಹೊತ್ತಿಗೆ ಬಿಡುಗಡೆ

Last Updated 17 ಜನವರಿ 2020, 12:35 IST
ಅಕ್ಷರ ಗಾತ್ರ

ರಾಮನಗರ: ಅಸ್ಸಾಂನಲ್ಲಿ ಶೇ 3ರಷ್ಟು ಎನ್‌ಆರ್‌ಸಿ ನಡೆಸಲು ₹3 ಕೋಟಿ ಖರ್ಚಾಗಿದೆ. ಇಡೀ ದೇಶದಲ್ಲಿಯೇ ಎನ್‌ಆರ್‌ಸಿ ನಡೆಸಬೇಕಾದರೆ ಅದೆಷ್ಟು ಹಣ ಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ.ಎನ್. ಉಮೇಶ್ ಹೇಳಿದರು.

ಇಲ್ಲಿನ ಚೈತನ್ಯ ಭವನದಲ್ಲಿ ಶುಕ್ರವಾರ 'ಮೋದಿ– ಶಾ ಕಾರ್ಖಾನೆಯ ಹತ್ತು ಮಹಾ ಸುಳ್ಳುಗಳು’ ಕಿರು ಮಾಹಿತಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ದೇಶ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಇಂತಹ ಕಾಯ್ದೆಗಳನ್ನು ಜಾರಿಗೆ ತಂದು ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಇದರ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

ಸಂಸತ್‌ನಲ್ಲಿ ಬಹುಮತ ದೊರೆತಿರುವುದನ್ನು ದುರುಪಯೋಗ ಮಾಡಿಕೊಂಡು ಸಂವಿಧಾನದ ಮೂಲ ಉದ್ದೇಶವನ್ನೇ ಬುಡಮೇಲು ಮಾಡುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ಜಾರಿಗೆ ತರಲು ಬಿಜೆಪಿ ಹೊರಟಿದೆ. ಇದನ್ನು ದೇಶದದಲ್ಲಿ ಜಾರಿಯಾಗಲು ಬಿಡುವುದಿಲ್ಲ ಎಂದು ತಿಳಿಸಿದರು.

ಡಿಸೆಂಬರ್‌ನಲ್ಲಿ ದೆಹಲಿಯ ರಾಮಲೀಲ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಆರ್‌ಸಿ ಜಾರಿ ಇಲ್ಲ ಎಂದು ಭಾಷಣ ಮಾಡಿದ್ದಾರೆ. ಆದರೆ ಸಂಸತ್‌ನ ಒಳಗೆ ಗೃಹ ಸಚಿವ ಅಮಿತ್‌ ಶಾ ಎನ್‌ಆರ್‌ಸಿ ನಡೆಸಿಯೇ ಸಿದ್ದ ಎನ್ನುತ್ತಾರೆ. 11 ದಿನಗಳಲ್ಲಿಯೇ ಸಿಎಎ, ಎನ್‌ಆರ್‌ಸಿ ಕುರಿತಂತೆ ಹತ್ತು ಮಹಾ ಸುಳ್ಳುಗಳನ್ನು ಹೇಳಿದ್ದಾರೆ. ದೇಶದಲ್ಲಿ ಈ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಹೋರಾಟಗಳ ತೀವ್ರತೆಗೆ ಬಿಜೆಪಿ ಮುಖಂಡರು ಹತಾಶರಾಗಿದ್ದಾರೆ ಎಂದರು.

ದೇಶದಲ್ಲಿ ಹಿಂದಿನಿಂದಲೂ ಸಂವಿಧಾನಬದ್ದವಾಗಿ ಪೌರತ್ವ ನೀಡುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಆದರೆ ಎಂದೂ ಧರ್ಮ ಆಧಾರಿತವಾಗಿ ಪೌರತ್ವ ನೀಡುವ ಪ್ರಕ್ರಿಯೆ ನಡೆದಿರಲಿಲ್ಲ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಹಿಂದೂ ರಾಷ್ಟ್ರ ಮಾಡುವ ಪ್ರಯತ್ನವನ್ನು 2003ರಿಂದಲೂ ಆರಂಭಿಸಿದ್ದು, ಈಗ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದೆ. ಪೌರತ್ವ ಕಾಯಿದೆ ಸಂವಿಧಾನಕ್ಕೆ ಮತ್ತು ಸ್ವಾಮಿ ವಿವೇಕಾನಂದರ ಹಿಂದುತ್ವಕ್ಕೂ ವಿರುದ್ಧವಾಗಿದೆ ಎಂದು ತಿಳಿಸಿದರು.

ಕಮ್ಯೂನಿಸ್ಟ್ ಪಕ್ಷಕ್ಕೆ 100 ವರ್ಷ: ಬೆಂಗಳೂರಿನ ಸಚಿವಾಲಯ ನೌಕರರ ಕ್ಲಬ್ ಸಭಾಂಗಣದಲ್ಲಿ ಇದೇ 20ರಂದು ಮಧ್ಯಾಹ್ನ 3.30ಕ್ಕೆ 'ಕಮ್ಯೂನಿಸ್ಟ್ ಪಕ್ಷ 100 ವರ್ಷಗಳು' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಿಪಿಐ(ಎಂ) ಪಾಲಿಟ್ ಬ್ಯುರೋ ಸದಸ್ಯೆ ಎಂ.ಎ. ಬೇಬಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಸಮಿತಿ ಸದಸ್ಯ ಕೆ. ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿರೋಧ ಸರಿಯಲ್ಲ: ರಾಮನಗರದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ.ಎಂ. ಶಿವನಂಜಯ್ಯ ಅವರನ್ನು ಕೆಲವು ಸಂಘಟನೆಗಳು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಕೆ.ಎನ್. ಉಮೇಶ್ ತಿಳಿಸಿದರು.

ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರು ಯಾರಾಗಬೇಕು ಎಂಬುದನ್ನು ಸಾಹಿತಿಗಳು, ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸುತ್ತದೆ. ಶಿವನಂಜಯ್ಯ ಅವರನ್ನು ವಿರೋಧಿಸಿದರೆ ಕುವೆಂಪು ಅವರನ್ನು ವಿರೋಧಿಸಿದಂತೆ ಎಂದು ತಿಳಿಸಿದರು.

ಸಿಪಿಐ(ಎಂ) ನ ಪದಾಧಿಕಾರಿಗಳಾದ ವನಜಾ, ಮಹಾಂತೇಶ್, ಡಿ. ಚಂದ್ರಶೇಖರ್, ಬಿ.ಬಿ. ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT