ಮಾಗಡಿ: ‘ಜವಳಿ ಇಲಾಖೆ ವತಿಯಿಂದ, ಪಟ್ಟಣದ ನೇಕಾರರಿಗೆ 300 ಮಗ್ಗ ಮಂಜೂರು ಮಾಡಿರುವುದಾಗಿ, ನಕಲಿ ದಾಖಲೆ ಸೃಷ್ಟಿಸಿ, ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ, ನ್ಯಾಯ ದೊರಕಿಸಿಕೊಡಬೇಕು’ ಎಂದು ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಅಧ್ಯಕ್ಷ ರಾಘವೇಂದ್ರ ನೇಕಾರ ಆಗ್ರಹಪಡಿಸಿದರು.
ಇಲ್ಲಿನ ಕಲ್ಯಾಬಾಗಿಲು ಬಳಿ ಬುಧವಾರ ನಡೆದ ‘ರಾಷ್ಟ್ರೀಯ ನೇಕಾರರ ದಿನ’ದ ಅಂಗವಾಗಿ ನೇಕಾರರಪ್ರತಿಭಾವಂತ ಮಕ್ಕಳಿಗೆ ಮತ್ತು ಹಿರಿಯ ನೇಕಾರರಿಗೆ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಾರ್ಷಿಕ ಶೇ 3ರ ಬಡ್ಡಿ ದರದಲ್ಲಿ ಸರ್ಕಾರ ಮಂಜೂರು ಮಾಡಿದ್ದ ಸಾಲ ನೇಕಾರರಿಗೆ ತಲುಪಿಲ್ಲ. ನೇಕಾರರಿಗೆ ಬಡಾವಣೆ ನಿರ್ಮಿಸಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಮಗ್ಗದ ನೇಕಾರರಿಗೆ ಸವಲತ್ತು ದೊರಕಿಸಿಕೊಡಲು ಶ್ರಮಿಸಲಾಗುವುದು’ ಎಂದು ಅವರು ತಿಳಿಸಿದರು.
ಹಿರಿಯ ನೇಕಾರ ಎಚ್.ಹನುಮಂತಯ್ಯ ಮಾತನಾಡಿ, ‘ಕೈಮಗ್ಗದ ಗುಂಡಿಗಳು ಪ್ರೋತ್ಸಾಹವಿಲ್ಲದೆ ಕಣ್ಮರೆಯಾಗಿವೆ. ನೇಕಾರರ ಸ್ಥಿತಿ ಶೋಚನೀಯವಾಗಿದೆ. ಜಾಗತೀಕರಣದಿಂದಾಗಿ ಕೈಮಗ್ಗಗಳಿಗೆ ನೆಲೆ ಇಲ್ಲದಂತಾಗಿದೆ. ಸ್ವಾಮಿನಾಥನ್ ವರದಿ ಜಾರಿಗೊಳಿಸಿ, ಕುಲ ಕಸುಬು ಉಳಿಸಲು ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.