ರಾಮನಗರ: ಜಿಲ್ಲೆಯಲ್ಲಿನ 817 ಗ್ರಾಮಗಳಲ್ಲಿ ಸೆಪ್ಟೆಂಬರ್ 1ರಿಂದ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವು ಆರಂಭಗೊಳ್ಳಲಿದೆ.
ಕೃಷಿ ಮತ್ತು ಕಂದಾಯ ಇಲಾಖೆಯ ಜಂಟಿ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದ್ದು, 691 ಸಮೀಕ್ಷೆಗಾರರು ಭಾಗವಹಿಸಲಿದ್ದಾರೆ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕರು ಪಾಲ್ಗೊಳ್ಳಲಿದ್ದಾರೆ. ಮೊಬೈಲ್ ತಂತ್ರಾಂಶ ಆಧಾರಿತ ಕಾರ್ಯಕ್ರಮ ಇದಾಗಿದೆ.
ಏನು ಪ್ರಯೋಜನ: ಈ ಸಮೀಕ್ಷೆಯನ್ನು ಆಧರಿಸಿಯೇ ಸರ್ಕಾರದಿಂದ ಬೆಳೆ ಹಾನಿ ಪರಿಹಾರ, ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ, ಬೆಳೆ ವಿಮೆ ಮೊದಲಾದ ಅಂಶಗಳು ನಿರ್ಧಾರ ಆಗಲಿವೆ. ರೈತರು ಖದ್ದು ಸ್ಥಳದಲ್ಲೇ ಇದ್ದು, ಬೆಳೆಯ ನಿಖರ ಮಾಹಿತಿಗಳನ್ನು ಸಮೀಕ್ಷಾ ತಂಡಕ್ಕೆ ನೀಡಬೇಕಿದೆ.
ಪ್ರಸಕ್ತ ಸಾಲಿನಲ್ಲಿ ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿದೆ. ಯಾವ್ಯಾವ ಬೆಳೆ ಬೆಳೆಯಲಾಗಿದೆ. ಎಷ್ಟು ನಷ್ಟುಗೊಂಡಿದೆ. ಎಷ್ಟು ಮೊತ್ತದ ಪರಿಹಾರ ಬೇಕು. ಜಿಲ್ಲೆಯ ಪ್ರಮುಖ ಬೆಳೆಗಳೇನು? ಮಳೆಯ ಪ್ರಮಾಣ, ಆಗಿರುವ ನಷ್ಟದ ಅಂದಾಜು ಎಲ್ಲವೂ ಈ ಸಮೀಕ್ಷೆ ಮೂಲಕ ತಿಳಿಯಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ತಿಳಿಸಿದರು.