ರಾಮನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಅಣ್ಣಹಳ್ಳಿ ಗ್ರಾಮದಲ್ಲಿ ಹೈನುಗಾರಿಕಾ ತರಬೇತಿ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಹೈನುಗಾರಿಕೆಯಲ್ಲಿ ರೈತರಿಗೆ ನಿಯಮಿತವಾದ ಆದಾಯವಿದ್ದು, ಈ ಉದ್ಯಮದಲ್ಲಿ ಯಶಸ್ಸು ಪಡೆಯಲು ರಾಸುಗಳ ಆಯ್ಕೆ ಮುಖ್ಯ. ಉತ್ತಮ ರಾಸುಗಳನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಭೌತಿಕ ಲಕ್ಷಣಗಳ ಹಾಗೂ ಕಾಲ ಕಾಲಕ್ಕೆ ಹಸು ಹಾಗೂ ಎಮ್ಮೆಗಳಿಗೆ ಪೂರೈಸಬೇಕಾದ ಆಹಾರದ ಪ್ರಮಾಣ ಮತ್ತು ಗುಣಮಟ್ಟದ ಕುರಿತು ವಿವರವಾದ ಮಾಹಿತಿಯನ್ನು ಪಶುವೈದ್ಯ ಡಾ. ಕೃಷ್ಣಮೂರ್ತಿ ನೀಡಿದರು.
‘ನಮ್ಮ ದೇಶವು ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. ಹಾಲು ಉತ್ಪಾದನೆಯನ್ನು ಪ್ರೋತ್ಸಾಹಿಸಲು ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಹಾಲು ಉತ್ಪಾದಿಸುವ ಚಟುವಟಿಕೆಗಳಲ್ಲಿ ತೊಡಗಿದ ರೈತರು ಹೊಸ ತಾಂತ್ರಿಕತೆ ಬಳಸಿಕೊಂಡು ಹಾಲಿನ ಇಳುವರಿ ಹೆಚ್ಚಿಸಿ ಆರ್ಥಿಕವಾಗಿ ಸಬಲರಾಗಬೇಕು’ ಎಂದು ತಿಳಿಸಿದರು.
ಹೈನುಗಾರಿಕೆ ಮೂಳಕ ಆರ್ಥಿಕವಾಗಿ ಸಬಲರಾಗಬಹುದು. ಸಾವಯವ ಗೊಬ್ಬರ ಬಳಕೆ, ತಳಿ ಸಂವರ್ಧನೆ, ಉತ್ತಮ ಮೇವು, ಕಾಯಿಲೆಗಳು ಮತ್ತು ಪರಿಹಾರ, ಕರುಗಳ ಪಾಲನೆ, ಕೃತಕ ಗರ್ಭಧಾರಣೆ, ಅಜೋಲ ಬೆಳೆಯುವುದು, ಮೇವು ಕಟಾವು, ಕೊಟ್ಟಿಗೆ ನಿರ್ಮಾಣ, ಸರ್ಕಾರದ ಸಹಾಯಧನಗಳ ಕುರಿತು ಮಾಹಿತಿ ನೀಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸೂರ್ಯನಾರಾಯಣ, ಕೃಷಿ ಮೇಲ್ವಿಚಾರಕ ಕುಮಾರ್, ಮೇಲ್ವಿಚಾರಕ ದಿವಾಕರ್, ಸೇವಾ ಪ್ರತಿನಿಧಿ ವೇದ ಇದ್ದರು.