ರಾಮನಗರ: ಜಾನಪದ ಲೋಕದಲ್ಲಿ ಶ್ರೀಪಟ್ಟಲದಮ್ಮ ಜಾನಪದ ಕಲಾವಿದರ ಸಂಘದ ಪದಾಧಿಕಾರಿಗಳು ಪೂಜಾ ಕುಣಿತದ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲಾವಿದ ಶ್ರೀನಿವಾಸ್ ‘20 ವರ್ಷಗಳಿಂದ ಪೂಜಾ ಕುಣಿತ ಪ್ರದರ್ಶನ ನೀಡುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಪೂಜಾ ಕುಣಿತಕ್ಕೆ ಬೇಡಿಕೆ ಕಡಿಮೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಹಳ್ಳಿಗಳಲ್ಲಿಯೂ ಹಬ್ಬದ ಆಚರಣೆ ಕಡಿಮೆಯಾಗುತ್ತಿವೆ. ನವೆಂಬರ್ ತಿಂಗಳಿನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದರಿಂದ ಜನಪದ ಕಲೆಗಳ ಪ್ರದರ್ಶನಕ್ಕೆ ಅವಕಾಶ ಸಿಗುತ್ತಿಲ್ಲ ಎಂದು ಹೇಳಿದರು.
ಸರ್ಕಾರ ವತಿಯಿಂದ ಜನಪದ ಕಲಾವಿದರಿಗೆ ಗುರುತಿನ ಚೀಟಿ ನೀಡಬೇಕು. ಅರ್ಹ ಕಲಾವಿದರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು. ಉಚಿತ ಬಸ್ ಹಾಗೂ ರೈಲ್ವೆ ಪಾಸ್ ನೀಡಬೇಕು ಎಂದು ಮನವಿ ಮಾಡಿದರು.
ಕಲಾವಿದ ಪಾರ್ಥಸಾರಥಿ ಮಾತನಾಡಿ, ಕಲಾವಿದರಿಗೆ ನೀಡುತ್ತಿರುವ ₹1500 ಮಾಸಾಶನ ಹೆಚ್ಚಿಸಬೇಕು. ವಯೋಮಿತಿ 55 ವರ್ಷಕ್ಕೆ ಇಳಿಸಬೇಕು. ಸರ್ಕಾರವೇ ಕಲಾವಿದರನ್ನು ಗುರುತಿಸಿ ಸನ್ಮಾನಿಸಬೇಕು. ಪ್ರಶಸ್ತಿಗಾಗಿ ಅರ್ಜಿ ಕರೆಯುವ ಸಂಸ್ಕೃತಿ ಬಿಡಬೇಕು ಎಂದು ಒತ್ತಾಯಿಸಿದರು.