ಮಾಗಡಿ: ಆದಿಶಕ್ತಿ ಚೌಡೇಶ್ವರಿ ದೇವಿಯನ್ನು ಶ್ರದ್ಧಾಭಕ್ತಿಯಿಂದ ಆರಾಧನೆ ಮಾಡುವುದರ ಜತೆಗೆ ಕಾಯಕವೇ ಕೈಲಾಸ ಎಂಬಂತೆ ಬದುಕು ಕಟ್ಟಿಕೊಳ್ಳಬೇಕು. ಸರ್ವರೂ ಸಹೋದರರಂತೆ ಜೀನವ ನಡೆಸಬೇಕೆಂದು ಎಂದು ಹಿರಿಯ ರಂಗ ಕಲಾವಿದ ಎಚ್.ಪಿ.ಹನುಮಂತಯ್ಯ ತಿಳಿಸಿದರು.
ಪಟ್ಟಣದ ಬಾಬು ಜಗಜೀವನ್ ರಾಮ್ ನಗರದಲ್ಲಿ ಚೌಡೇಶ್ವರಿ ದೇವಿ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿಸಿ ಮಾತನಾಡಿದರು.
ನೆಲಮೂಲ ಸಂಸ್ಕೃತಿ ಕಡೆಗಣಿಸದೆ, ‘ಆಧುನಿಕತೆ ಅಳವಡಿಸಿಕೊಳ್ಳಬೇಕು. ದೇಗುಲಗಳು ಭಾರತೀಯ ಪರಂಪರೆಯ ಸಾಂಸ್ಕೃತಿಕ ಕೇಂದ್ರಗಳನ್ನಾಗಿ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ’ ಎಂದರು.
ಹಿರಿಯರಾದ ಚೌಡಪ್ಪ ಮಾತನಾಡಿ, ದೇವನೊಬ್ಬ ನಾಮ ಹಲವು. ದೇವರಲ್ಲಿ ತಾರತಮ್ಯವಿಲ್ಲ. ಯಾವುದೇ ದೇವರನ್ನು ಆರಾಧನೆ ಮಾಡಿದರೂ ಮುಕ್ತಿ ಸಿಗಲಿದೆ ಎಂದರು.
ಪುರುಷ ಆರೋಗ್ಯ ಸಹಾಯಕ ತುಕಾರಾಮ್ ಮಾತನಾಡಿ, ಶಿಥಿಲವಾಗಿದ್ದ ಪುರಾತನ ಚೌಡೇಶ್ವರಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಲು ಸಹಕರಿಸಿದ ಎಲ್ಲ ಭಕ್ತರ ಸೇವೆಯನ್ನು ಸ್ಮರಿಸಿದರು.
ಬಿಜೆಪಿ ಮುಖಂಡ ಗೋಪಾಲಕೃಷ್ಣ ಮಾತನಾಡಿ, ದೇಶದ ಸನಾತನ ಸಂಸ್ಕೃತಿ ಮಕ್ಕಳಿಗೆ ಕಲಿಸಿಕೊಡುವುದು ಅತಿ ಮುಖ್ಯವಾಗಿದೆ ಎಂದರು.
ಅರ್ಚಕ ಎಂ.ವಿ.ಶ್ರೀನಿವಾಸ್, ಬೈಚಾಪುರ ಶನೇಶ್ವರಸ್ವಾಮಿ ದೇವಾಲಯದ ಅರ್ಚಕ ಸಿದ್ದಪ್ಪಾಜಿ ಮಾತನಾಡಿದರು.
ವೇದಬ್ರಹ್ಮಶ್ರೀ ಕೃಷ್ಣಶ್ರೌತಿ ತಂಡದ ಆಗಮಿಕರು ಧಾರ್ಮಿಕ - ವಿಧಿವಿಧಾನ ನಡೆಸಿಕೊಟ್ಟರು. ಸಾಮೂಹಿಕ ಅನ್ನದಾನ ನಡೆಯಿತು.