ಕನಕಪುರ: ತ್ಯಾಗ ಮತ್ತು ಬಲಿದಾನಕ್ಕೆ ಹೆಸರಾದ ಬಕ್ರೀದ್ನಲ್ಲಿ ಶಕ್ತಿಗೆ ಅನುಗುಣವಾಗಿ ದಾನ ಮಾಡಬೇಕು. ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಸಂತೋಷವಾಗಿ ಬಾಳಬೇಕಾಗಿದೆ ಎಂದು ಮುಖಂಡ ಇಕ್ಬಾಲ್ ಹುಸೇನ್ ಹೇಳಿದರು.
ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಹೂಕುಂದ ಗ್ರಾಮದಲ್ಲಿ ನಡೆದ ಬಕ್ರೀದ್ ಹಬ್ಬದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.
ಈ ಹಬ್ಬದಲ್ಲಿ ವಿಶೇಷವಾಗಿ ಟಗರು ಬಲಿಕೊಟ್ಟು ಅದರ ಮಾಂಸ ಮೂರು ಭಾಗವಾಗಿ ಒಂದು ಭಾಗ ಸ್ವಂತಕ್ಕೆ, ಒಂದು ಭಾಗ ಸಂಬಂಧಿಕರಿಗೆ, ಮತ್ತೊಂದು ಭಾಗ ಸಮಾಜದಲ್ಲಿನ ಬಡವರಿಗೆ ನೀಡಬೇಕೆಂದು ತಿಳಿಸಿದರು.
ಹೂಕುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಮೀರ್ ಅಹಮ್ಮದ್ ಮಾತನಾಡಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿಯಾದ ಮಳೆಯಿಂದ ನೆರೆ ಉಂಟಾಗಿ ಸಾವಿರಾರು ಜನ ಸಂತ್ರಸ್ತರಾಗಿದ್ದಾರೆ ಎಂದು ಹೇಳಿದರು.
ಪಟೇಲ್ ಇಲಿಯಾಸ್ ಶರೀಪ್, ಉದ್ಯಮಿ ಸರ್ದಾರ್ ಅಹಮ್ಮದ್, ಅಬ್ದುಲ್ಪಾಷ ಸೇರಿದಂತೆ ಸಮುದಾಯ ಮುಖಂಡರು ಇದ್ದರು. ಕೋಡಿಹಳ್ಳಿ ಪೊಲೀಸರು ಬಕ್ರೀದ್ ಆಚರಣೆಗೆ ಸೂಕ್ತ ಭದ್ರತೆ ಒದಗಿಸಿದ್ದರು.