ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವಿ.ವಿ ಕ್ಯಾಂಪಸ್‌ಗೆ ಮತ್ತೆ ಗ್ರಹಣ

ಬಜೆಟ್‌ನಲ್ಲಿ ₹600 ಕೋಟಿ ಘೋಷಣೆ; ಚಾಲನೆ ನೀಡಲು ಹಿಂದೇಟು
Last Updated 24 ಏಪ್ರಿಲ್ 2022, 7:11 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್‌ ನಿರ್ಮಾಣಕ್ಕೆ ಮತ್ತೆ ಗ್ರಹಣ ಹಿಡಿದಿದೆ.

ಕಳೆದ ಜನವರಿಯಲ್ಲಿ ರಾಮನಗರಕ್ಕೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್‌ನಲ್ಲೇ ವಿ.ವಿ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವುದಾಗಿ ಭರವಸೆ ನೀಡಿದ್ದರು. ಈ ಬಾರಿಯ ಬಜೆಟ್‌ನಲ್ಲೂ ಈ ವಿಷಯ ಪ್ರಸ್ತಾಪ ಆಗಿದ್ದು, ವಿ.ವಿ ಕ್ಯಾಂಪಸ್‌ಗಾಗಿ ₹600 ಕೋಟಿ ಅನುದಾನ ಘೋಷಿಸಿದ್ದರು. ಅದಾದ ತಿಂಗಳ ಬಳಿಕವೂ ಈ ವಿಷಯದಲ್ಲಿ ಯಾವುದೇ ಬೆಳವಣಿಗೆ ಆಗದಿರುವುದು ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ.

ರಾಮನಗರ ಹೊರವಲಯದಲ್ಲಿ ಇರುವ ಅರ್ಚಕರಹಳ್ಳಿ ಬಳಿ ಈ ವಿ.ವಿ ಕ್ಯಾಂಪಸ್ ನಿರ್ಮಿಸಲು ಉದ್ದೇಶಿಸಲಾಗಿದೆ. ಭೂವ್ಯಾಜ್ಯದ ಕಾರಣಕ್ಕೆ ಯೋಜನೆ ವಿಳಂಬ ಆಗುತ್ತಲೇ ಇದೆ. ಹೀಗಾಗಿ, ಸದ್ಯ ಭೂವ್ಯಾಜ್ಯ ಹೊರತಾದ ಜಮೀನನ್ನು ಬಳಸಿಕೊಂಡು ವಿ.ವಿ ಕ್ಯಾಂಪಸ್ ನಿರ್ಮಾಣಕ್ಕೆ ಮತ್ತೊಮ್ಮೆ ಚಾಲನೆ ನೀಡುವುದಾಗಿ ಸಚಿವರು ಹಾಗೂ ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ.

ವಿಶ್ವವಿದ್ಯಾಲಯಕ್ಕೆಂದು ರಾಮ ನಗರ ತಾಲ್ಲೂಕಿನ ಅರ್ಚಕರಹಳ್ಳಿ ಬಳಿ 216.6 ಎಕರೆ ಜಮೀನು ಗುರುತಿಸ ಲಾಗಿದೆ. ಇದರಲ್ಲಿ ವಿ.ವಿ ಭವನಗಳ ಕಾಮಗಾರಿಗೆ 71 ಎಕರೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ 145 ಎಕರೆ ಮೀಸಲಾಗಿದೆ. ಈ ಪೈಕಿ ಒಟ್ಟು 76 ಎಕರೆ ಜಮೀನಿನ ಪರಿಹಾರಕ್ಕೆ ಸಂಬಂಧಿಸಿ ವ್ಯಾಜ್ಯವಿದೆ. ಉಳಿದ 140 ಎಕರೆ ಭೂಮಿ ವಿವಾದರಹಿತವಾಗಿದ್ದು, ಅಲ್ಲಿ ಮೊದಲ ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.

ಈ ಹಿಂದೆಯೇ ವಿಶ್ವವಿದ್ಯಾಲಯದ ತಾಂತ್ರಿಕ ವಿಭಾಗದ ಸಿಬ್ಬಂದಿ ರಾಮನಗರದಲ್ಲಿ ಬೀಡು ಬಿಟ್ಟಿದ್ದು, ಸದ್ಯ ಲಭ್ಯವಿರುವ ಜಮೀನಿಗೆ ಅನುಗುಣವಾಗಿ ಕಟ್ಟಡಗಳ ನಿರ್ಮಾಣಕ್ಕೆ ಸರ್ವೆ ಕಾರ್ಯ ಆರಂಭಿಸಿದ್ದರು. ಅವರಿಗಾಗಿ ಕಂದಾಯ ಭವನವನ್ನು ಬಿಟ್ಟುಕೊಡಲಾಗಿತ್ತು. ಆದರೆ, ನಂತರದಲ್ಲಿ ಆ ಭವನವನ್ನು ಕೋವಿಡ್ ರೋಗಿಗಳ ಆರೈಕೆಗಾಗಿ ಬಳಸಲಾಗುತ್ತಿದೆ.

ಆಡಳಿತ ಭವನ, ವೈದ್ಯಕೀಯ, ದಂತ, ನರ್ಸಿಂಗ್ ಕಾಲೇಜುಗಳು, 750 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ, 250 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿದ್ಯಾರ್ಥಿನಿಲಯಗಳು, ವಸತಿ ಗೃಹಗಳು ಸೇರಿದಂತೆ ಒಟ್ಟು 16 ಬೃಹತ್ ಕಟ್ಟಡಗಳನ್ನು ಈ ಕ್ಯಾಂಪಸ್‌ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT