ರಾಮನಗರ:ತಾಲ್ಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಆರು ಆನೆಗಳ ಹಿಂಡು ದಾಳಿ ನಡೆಸಿ ರಾಗಿ, ತೆಂಗು, ಬಾಳೆ ಮೊದಲಾದ ಬೆಳೆಗಳನ್ನು ನಾಶಪಡಿಸಿವೆ. ಇದೇ ವೇಳೆ ಬೋರ್ವೆಲ್ ಪರಿಕರಗಳು, ನೀರಿನ ಪೈಪ್ ಸಹ ಹಾಳಾಗಿವೆ.
ತೆಂಗಿನಕಲ್ಲು ಅರಣ್ಯ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಲಕ್ಕೋಜನಹಳ್ಳಿ ಗ್ರಾಮದ ಶಿವಶಂಕರ್, ಮಂಜು, ಭಗೀರಥ, ಕರಿಯಪ್ಪ ಎಂಬುವರ ಜಮೀನಿನಲ್ಲಿದ್ದ ರಾಗಿ ಮೆದೆಗಳು, ಸುರೇಶ್ ಎಂಬುವರ ಕೊಳವೆಬಾವಿ ಪರಿಕರಗಳು, ಡಿ. ಪುಟ್ಟಸ್ವಾಮಯ್ಯ ಎಂಬುವರ ಬಾಳೆತೋಟ, ಭಗೀರಥ ಎಂಬುವರ ತೆಂಗಿನ ಮರಗಳು ಹಾನಿಗೀಡಾಗಿವೆ.
ಆನೆ ದಾಳಿಯಿಂದ ರೈತರಿಗೆ ಸಾಕಷ್ಟು ನಷ್ಟ ಸಂಭವಿಸಿದೆ.ಪದೇ ಪದೇ ಫಸಲು ಹಾಳಾಗುತ್ತಿದೆ. ಬೆಳಗಿನ ವೇಳೆಯಲ್ಲಿ ಕೃಷಿ ಕೆಲಸ ನಿರ್ವಹಿಸಲು ಭಯವಾಗುತ್ತಿದೆ. ನಷ್ಟವಾದ ಬೆಳೆಗಳಿಗೆ ಸೂಕ್ತವಾದ ವೈಜ್ಞಾನಿಕ ಪರಿಹಾರ ನೀಡಬೇಕು. ಆನೆಗಳನ್ನು ತೆಂಗಿನಕಲ್ಲು ಅರಣ್ಯದ ಕಡೆ ಬರದಂತೆ ಮಾಡಬೇಕು ಎಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದರು.
ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್, ಉಪ ವಲಯ ಅರಣ್ಯಾಧಿಕಾರಿ ಮಧುಕುಮಾರ್, ಅರಣ್ಯ ರಕ್ಷಕ ವೆಂಕಟಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.