ರಾಮನಗರ: ಸೌರ, ಪವನ ಶಕ್ತಿ ಮೊದಲಾದ ನವೀಕರಿಸಬಹುದಾದ ಶಕ್ತಿ ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ಇಂಧನ ಸ್ವಾವಲಂಬಿ ಆಗಬೇಕಿದೆ ಎಂದು ರಾಮನಗರ ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕೆ.ಎನ್. ಶಿವಣ್ಣ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬೆಸ್ಕಾಂ ಸಹಯೋಗದಲ್ಲಿ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಚೇತನ ಸಮುದಾಯ ಭವನದಲ್ಲಿ ಶನಿವಾರ ನಡೆದ ಉಜ್ವಲ ಭಾರತ ಉಜ್ವಲ ಭವಿಷ್ಯ ವಿದ್ಯುತ್ @ 2047 ವಿದ್ಯುತ್ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶವನ್ನು ಮುನ್ನಡೆಸುವುದು ನಮ್ಮ ಕೆಲಸ. ವಿದ್ಯುತ್ ಉತ್ಪಾದನೆ, ಉತ್ಪಾದನಾ ಮೂಲಗಳು, ವಿದ್ಯುತ್ ಸದ್ಬಳಕೆ, ಅಪವ್ಯಯ ತಡೆಗಟ್ಟಲು ಕುರಿತು ಅರಿವನ್ನು ಬೆಳೆಸಿಕೊಳ್ಳಬೇಕು. ಅವಶ್ಯಕತೆ ಇಲ್ಲದ ಕಡೆ ವಿದ್ಯುತ್ತನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ಜನರು ತಮ್ಮ ಮನೆಗಳ ಮೇಲೆ ಸೌರ ವಿದ್ಯುತ್ ಘಟಕ ಅಳವಡಿಸಿಕೊಂಡು ವಿದ್ಯುತ್ ಉತ್ಪಾದಿಸಿಕೊಂಡು ಸ್ವಾವಲಂಬಿಗಳಾಗಲು ಸರ್ಕಾರ ಸಹಾಯಧನ ಬರಿಸಲಿದೆ ಎಂದರು.
ಪಿಜಿಸಿಎಲ್ ಬಿಡದಿ ಉಪ ಕೇಂದ್ರದ ಅಧಿಕಾರಿ ಕೆ.ಎನ್. ಪ್ರಸಾದ್ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 2047ಕ್ಕೆ ನೂರು ವರ್ಷಗಳಾಗುವ ಹಿನ್ನೆಲೆಯಲ್ಲಿ ಭಾರತವು ನವೀಕರಿಸಬಹುದಾದ ಸಂಪನ್ಮೂಲಗಳಾದ ಸೌರ ಮತ್ತು ಪವನಶಕ್ತಿಗಳ ಮೂಲಕ ವಿದ್ಯುತ್ ಸ್ವಾವಲಂಬನೆ ಹೊಂದುವುದು ಕೇಂದ್ರ ಸರ್ಕಾರದ ಆಶಯವಾಗಿದೆ ಎಂದು ತಿಳಿಸಿದರು.
ರಾಮನಗರ ಬೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ಎನ್. ಶಿವಕುಮಾರ್, ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ರೇಖಾ, ಬೆಸ್ಕಾಂನ ಆಡಳಿತ ಸಿಬ್ಬಂದಿ ಭಾಗವಹಿಸಿದ್ದರು.