ಕನಕಪುರ: ಕರ್ನಾಟಕ ರಾಜ್ಯ ರೈತ ಸಂಘದ ಸಾತನೂರು ಹೋಬಳಿ ಘಟಕದ ವತಿಯಿಂದ ರೈತರ ಸಮಸ್ಯೆಗಳ ಸಭೆ ಮಂಗಳವಾರ ಸಾತನೂರಿನಲ್ಲಿ ನಡೆಯಿತು.
ರೈತ ಸಂಘದ ಬೆಂಗಳೂರು ವಿಭಾಗದ ಕಾರ್ಯದರ್ಶಿ ಡಾ.ಎಸ್.ಬಿ.ಚೌಕಿಮಠ ಮಾತನಾಡಿ, ವಿದ್ಯುತ್ ವಲಯದ ಖಾಸಗೀಕರಣ, ಕೃಷಿ ಪಂಪ್ ಸೆಟ್ಗಳಿಗೆ ಮೀಟರ್ ಅಳವಡಿಕೆ ಸೇರಿದಂತೆ ಇನ್ನಿತರ ರೈತ ವಿರೋಧಿ ಧೋರಣೆಗಳನ್ನು ವಿರೋಧಿಸಿ ದೇಶದಾದ್ಯಂತ ರೈತ ಸಂಘಟನೆ ಚಳವಳಿ ನಡೆಸುತ್ತಿದೆ.ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಜಿಲ್ಲಾ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಸರ್ಕಾರದ ಕೃಷಿ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೇಶದಲ್ಲಿ ಕೃಷಿ ವಲಯ ಅನೇಕ ಬಿಕಟ್ಟುಗಳನ್ನು ಎದುರಿಸುತ್ತಿದೆ. ಸರ್ಕಾರಗಳು ಕಾರ್ಪೊರೇಟ್ ವಲಯದ ರಕ್ಷಣೆಗೆ ನಿಂತಿದೆ.ಕೃಷಿ ಕ್ಷೇತ್ರದ ಬೆನ್ನೆಲುಬು ಮುರಿಯಲು ಯತ್ನಿಸಲಾಗುತ್ತಿದೆ.ದೇಶದಅಭಿವೃದ್ಧಿಗೆ ಕೃಷಿ ಕ್ಷೇತ್ರವೇ ಮೂಲಾಧಾರವೆಂದು ಹೇಳುವ ಸರ್ಕಾರಗಳು, ವಚನಭ್ರಷ್ಟರಾಗಿ ಗ್ರಾಮೀಣ ಪ್ರದೇಶದ ಜನರ ಬದುಕನ್ನು ಅತಂತ್ರವಾಗಿಸುತ್ತಿವೆಎಂದು ದೂರಿದರು.
ರೈತರು ಸಾಲ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಡಾನೆ ಸೇರಿದಂತೆ ಇನ್ನಿತರ ವನ್ಯ ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆಗಳು ನಾಶವಾಗುತ್ತಿದೆ. ರಸಗೊಬ್ಬರದ ಸಮಸ್ಯೆ, ಕೃಷಿ ಪಂಪ್ ಸೆಟ್ಗಳಿಗೆ ರಾತ್ರಿ ವೇಳೆ ವಿದ್ಯುತ್ ನೀಡುತ್ತಿರುವ ಕಾರಣ ರೈತರು ರಾತ್ರಿಯೆಲ್ಲ ನಿದ್ದೆಗೆಟ್ಟಿರುವ ಸಮಸ್ಯೆಗೆ ಸಿಲುಕಿದ್ದಾರೆ.ಸರ್ಕಾರದ ಯೋಜನೆಗಳನ್ನು ಪಡೆಯಲು ರೈತರು ನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ದುಃಸ್ಥಿತಿ ಇದೆ ಎಂದರು.
ರೈತ ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ ಕಾಮಯ್ಯ, ಮುಖಂಡ ಸೋರೆಕಾಯಿದೊಡ್ಡಿ ಸಿದ್ದೇಗೌಡ, ಸದಸ್ಯರಾದ ನಿಂಗೇಗೌಡ, ಶಿವ, ಗೂಳಿಗೌಡ, ಸ್ವಾಮಿಗೌಡ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.