ಕಳೆದ ಸಾಲಿನಲ್ಲಿ ಬರ ರಾಮನಗರ ಜಿಲ್ಲೆಯನ್ನು ಬಾಧಿಸಿತ್ತು. ಮುಂಗಾರು ಹಂಗಾಮಿನಲ್ಲಿ ಕನಕಪುರ ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ ತೀವ್ರ ಬರದ ಪರಿಸ್ಥಿತಿ ಇದ್ದು, ರಾಜ್ಯ ಸರ್ಕಾರ ಈ ಎರಡೂ ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿತ್ತು. ಹಿಂಗಾರಿನಲ್ಲಿ ಸಹ ನಿರೀಕ್ಷೆಯಷ್ಟು ಮಳೆ ಬಿದ್ದಿರಲಿಲ್ಲ. ವರುಣನ ಬಗ್ಗೆ ನಿರೀಕ್ಷೆ ಇಟ್ಟುಕೊಂಡು ಬಿತ್ತನೆ ಮಾಡಿದ್ದ ರೈತರು ಈ ಬಾರಿಯೂ ನಷ್ಟ ಅನುಭವಿಸಿದ್ದರು. ಪರಿಣಾಮವಾಗಿ ಹಿಂಗಾರಿನಲ್ಲಿ ಬಿತ್ತನೆಯಾಗಿದ್ದ ಅಷ್ಟೂ ಬೆಳೆಯು ನಷ್ಟವಾಗಿತ್ತು. ರಾಜ್ಯ ಸರ್ಕಾರ ರಾಮನಗರ, ಕನಕಪುರ ಹಾಗೂ ಮಾಗಡಿ ತಾಲ್ಲೂಕುಗಳನ್ನು ಹಿಂಗಾರಿನಲ್ಲಿ ಬರ ಎಂದು ಘೋಷಣೆ ಮಾಡಿತ್ತು.