ಚನ್ನಪಟ್ಟಣ: ‘ಸ್ತ್ರೀಶಕ್ತಿ ಗುಂಪುಗಳ ಮೂಲಕ ಆರ್ಥಿಕ ಸಹಾಯ ನೀಡುತ್ತಾ ಮಹಿಳಾ ಸಬಲೀಕರಣ ಕಾರ್ಯ ಕೈಗೊಂಡಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೆಲಸ ಇತರೇ ಧಾರ್ಮಿಕ ಕ್ಷೇತ್ರಗಳಿಗೂ ಪ್ರೇರಣೆಯಾಗಲಿ’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.
ಪಟ್ಟಣದ ಗುರುಕೃಪಾ ಕಟ್ಟಡದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ನಡೆದ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ವಿತರಣೆ, ತಾಲ್ಲೂಕಿನ ನೂರಾರು ಬಡವರಿಗೆ ಮತ್ತು ಅಂಗವಿಕಲರಿಗೆ ಆಹಾರದ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧಾರ್ಮಿಕ ಕಾರ್ಯದ ಜತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯೋಗ ಸೃಷ್ಟಿಸುವ ಗುಡಿ ಕೈಗಾರಿಕೆಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ ನಾಡಿನ ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿರುವ ಸಂಸ್ಥೆಯ ಕಾರ್ಯ ಇತರರಿಗೆ ಮಾದರಿ. ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಕೆಲಸ ಇಡೀ ದೇಶದಲ್ಲೇ ಮನ್ನಣೆ ಪಡೆದಿದೆ ಎಂದರು.
ಸಂಸ್ಥೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಗಂಗಾಧರ ಪೈ ಮಾತನಾಡಿಸಿದರು.
ತಹಶೀಲ್ದಾರ್ ನಾಗೇಶ್, ಡಿವೈಎಸ್ಪಿ ರಮೇಶ್, ನಗರಸಭಾ ಸದಸ್ಯ ರೇವಣ್ಣ, ಸಂಸ್ಥೆಯ ಜಿಲ್ಲಾ ನಿರ್ದೇಶಕ ಪಿ. ಶ್ರೀನಿವಾಸ್, ಚನ್ನಪಟ್ಟಣ ಯೋಜನಾಧಿಕಾರಿ ಜಯಂತ್ ಕುಮಾರ್, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರಾಧಿಕಾ ಹಾಜರಿದ್ದರು.