ರಾಮನಗರ: ಹೊರಗುತ್ತಿಗೆ ನೌಕರರ ಮುಷ್ಕರದ ನಾಲ್ಕನೇ ದಿನವಾದ ಸೋಮವಾರ ಪ್ರತಿಭಟನಾಕಾರರು ಅರೆ ಬೆತ್ತಲೆ ಹಾಗೂ ತಮಟೆ ಚಳವಳಿ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿರುವ ಮುಷ್ಕರದ ಸ್ಥಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪೌರ ಕಾರ್ಮಿಕ ಸಚಿವ ಎಂ.ಟಿ. ನಾಗರಾಜು ವಿರುದ್ಧ ಘೋಷಣೆ ಕೂಗಿದರು.ಕಾರ್ಮಿಕರು ಬಾಯಿ ಬಡೆದುಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ಸೂಚಿಸಿ ನಗರಸಭೆ ಸದಸ್ಯ ಕೆ.ಶೇಷಾದ್ರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಜಿಯಾವುಲ್ಲಾ ಮಾತನಾಡಿ, ಜವಾಬ್ದಾರಿಯುತ ಸರ್ಕಾರ ತಕ್ಷಣವೇ ಇವರ ಕೂಗಿಗೆ ಸ್ಪಂದಿಸಬೇಕು. ಪೌರ ಕಾರ್ಮಿಕರು ಸಾಮಾನ್ಯರಂತೆ ಜೀವನ ಸಾಗಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ನಗರಸಭೆ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಮಾತನಾಡಿ, ಹೊರಗುತ್ತಿಗೆ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ಗಮನ ಹರಿಸದಿರುವುದು ನೋವಿನ ಸಂಗತಿಯಾಗಿದೆ. ನಿಮ್ಮ ಬೇಡಿಕೆ ಈಡೇರುವವರೆಗೆ ನಿಮ್ಮ ಹೋರಾಟ ನಿರಂತರವಾಗಿರಲಿ. ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು. ಕಾರ್ಮಿಕರ ತಮಟೆ ತಾಳಕ್ಕೆ ಅವರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹಿನ್ ಪಾಷ, ಸದಸ್ಯರಾದ ದೌಲತ್ ಷರೀಫ್, ಮಣಿ, ಪೈರೋಜ್, ಪವಿತ್ರಾ ಮತ್ತಿತರರು ಇದ್ದರು.