ಕುದೂರು(ಮಾಗಡಿ): ಕಾಯಕ ನಿಷ್ಠೆಯಲ್ಲಿ ತೊಡಗಿಸಿಕೊಂಡು ಸಮಾನತೆಯಿಂದ ನಿಷ್ಕಳಂಕ ಬದುಕು ರೂಪಿಸಿಕೊಂಡಿದ್ದ ಶರಣರ ವಚನಗಳನ್ನು ಅಧ್ಯಯನ ಮಾಡುವುದರಿಂದ ಜೀವನ್ಮುಕ್ತಿ ದೊರೆಯಲಿದೆ ಎಂದು ಹಿರಿಯ ಜನಪದ ಕಲಾವಿದ ಎಚ್.ರಾಜಶೇಖರ್ ತಿಳಿಸಿದರು.
ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ನಡೆದ ದೇವರ ದಾಸಿಮಯ್ಯ ಅವರ 1040ನೇ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶರಣಕುಲಕ್ಕೆ ತಿಲಕ ಪ್ರಾಯರಾಗಿದ್ದ ದೇವರ ದಾಸಿಮಯ್ಯ ಅವರು ಮಾನವರಿಗೆ ಮಾನವ ಮುಚ್ಚುವ ಬಟ್ಟೆ ನೇಯ್ದು, ಭಗವಂತನ ನಿಜವಾದ ಕಾಯಕಯೋಗಿ ಎನಿಸಿದ್ದರು. ಶರಣದ ವಚನಗಳನ್ನು ಸರ್ವರೂ ಓದಿಕೊಂಡರೆ ನೈತಿಕತೆ ಬೆಳೆಯಲಿದೆ ಎಂದರು.
ಮುಖಂಡರಾದ ಜಯಚಂದ್ರಬಾಬು, ಶಶಿಧರ್, ಚಂದ್ರಶೇಖರ್, ಗೋಪಿ, ತಮ್ಮಯ್ಯಪ್ಪ, ಮಹೇಶ್, ಅರ್ಚಕ ಶಿವರಾಜ್, ದಾಸಿಮಯ್ಯ ಅವರ ಬದುಕು ಬರಹ ಕುರಿತು ಮಾತನಾಡಿದರು. ಭಜನೆ ಏರ್ಪಡಿಸಲಾಗಿತ್ತು.