ಹಾರೋಹಳ್ಳಿ (ಕನಕಪುರ): ಒಂದು ರಾಜಕೀಯ ಪಕ್ಷ ಪ್ರವರ್ಧಮಾನಕ್ಕೆ ಬರಲು ಪಕ್ಷದ ಕಾರ್ಯಕರ್ತರೇ ಕಾರಣ. ಪಕ್ಷದ ತಳಹದಿಯಾದ ಕಾರ್ಯಕರ್ತನ್ನು ಪುಂಡರು ಎಂದು ಕರೆದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬೌದ್ಧಿಕ ದಿವಾಳಿಗೆ ಸಾಕ್ಷಿ ಎಂದು ಬಿಜೆಪಿ ಹಿಂದುಳಿದ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ನಾಗರಾಜು ಟೀಕಿಸಿದರು.
ಇಲ್ಲಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರುದ್ರೇಶ್ ಹಾಗೂ ಬಿಜೆಪಿ ಕಾರ್ಯಕರ್ತರ ಬಗ್ಗೆ ಕುಮಾರಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಮುರಳೀಧರ್ ಮಾತನಾಡಿ, ಕುಮಾರಸ್ವಾಮಿ ಅವರು ಹಾಗಾಗ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಘನತೆಗೆ ತಕ್ಕನಂತೆ ಮಾತನಾಡಬೇಕು. ಇಂತಹ ಮಾತಗಳಿಂದ ಗೌರವನ್ನು ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲೆಗೆ ಬಿಜೆಪಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಹಸಿ ಸುಳ್ಳು ಹೇಳಿ ಜನರನ್ನು ವಂಚಿಸುವುದನ್ನು ಬಿಡಬೇಕೆಂದು ಹೇಳಿದರು.
ಹೋಬಳಿ ಘಟಕದ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಚೀರಣಕುಪ್ಪೆ ರಾಜೇಶ್, ಹಾರೋಹಳ್ಳಿ ಜ್ಞಾನೇಶ್ ಮಾತನಾಡಿ, ರುದ್ರೇಶ್ ಅವರು ನೈಸ್ ರಸ್ತೆಯಲ್ಲಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ಹೇಳುತ್ತಿರುವ ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿದ್ದಾಗ ಏಕೆ ಕ್ರಮಕೈಗೊಂಡಿಲ್ಲ. ಇವರ ಕುಟುಂಬದವರೇ ಕೇತಗಾನಹಳ್ಳಿ ಸರ್ಕಾರಿ ಜಾಗ ಕಬಳಿಸಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಮಾನಸಿಕ ಸೀಮಿತ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಇದಕ್ಕೆ ಕ್ಷಮೆಯಾಚಿಸಬೇಕು. ಇಲ್ಲವಾದ್ದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಒಬಿಸಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಾಲಾಜಿಸಿಂಗ್, ಜಿಲ್ಲಾ ಘಟಕದ ಉಪಾಧ್ಯಕ್ಷ ವಿಜಯಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಎಂ.ನಂಜುಂಡಯ್ಯ, ಸಿದ್ದಪ್ಪ, ರಮೇಶ್.ವಿ.ಜೆ.ಆರ್, ರಾಜು ಹುಳುಗೊಂಡನಹಳ್ಳಿ, ನಾಗರಾಜು, ಪ್ರಶಾಂತ, ಮಹೇಶ್ಕುಮಾರ್, ನಾರಾಯಣ್ ಇದ್ದರು.