ಚನ್ನಪಟ್ಟಣ: ಶಾಸಕ ಎಚ್.ಡಿ.ಕುಮಾರಸ್ವಾಮಿ ಮಂಗಳವಾರವೂ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಸಿದರು.
ಕಳ್ಳಿಹೊಸೂರು ಗ್ರಾಮದಿಂದ ಸಭೆ ಆರಂಭಿಸಿದ ಅವರು, ನಂತರ ತಿಟ್ಟಮಾರನಹಳ್ಳಿ, ಕುಂತೂರುದೊಡ್ಡಿ, ಚಿಕ್ಕನದೊಡ್ಡಿ, ಪಟ್ಲು, ಅಬ್ಬೂರುದೊಡ್ಡಿ, ಅಬ್ಬೂರು, ದಶವಾರ, ರಾಮನಾಥಪುರ, ಮಾಕಳಿ ಹೊಸಹಳ್ಳಿ, ನಾಯಿದೊಳ್ಳೆ, ಮಾಕಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರ ಅಹವಾಲು ಸ್ವೀಕರಿಸಿದರು.
ಕುಂತೂರುದೊಡ್ಡಿಯಲ್ಲಿ ಜನರ ಸಮಸ್ಯೆ ಆಲಿಸಿದ ನಂತರ ಚಿಕ್ಕನದೊಡ್ಡಿಗೆ ಬಂದಾಗ ಅಲ್ಲಿಯ ಜನರು ಆಶ್ರಯ ನಿವೇಶನಗಳಿಗೆ ನೀಡಿರುವ ಜಾಗವನ್ನು ಸಮುದಾಯ ಭವನ ಹಾಗೂ ಇತರ ಸಾರ್ವಜನಿಕರ ಉದ್ದೇಶಕ್ಕೆ ನೀಡಬೇಕೆಂದು ಮನವಿ ಮಾಡಿದರು.
ಈಗಾಗಲೇ ದಲಿತ ಸಮುದಾಯದ ಫಲಾನುಭವಿಗಳಿಗೆ ನಿವೇಶನ ನೀಡಲು ಜಾಗ ಮಂಜೂರು ಆಗಿದ್ದು ಬೇರೆಡೆ ಜಾಗ ನೀಡುವುದಾಗಿ ಭರವಸೆ ನೀಡಿದರು.
ಅಂಗವಿಕಲರೊಬ್ಬರ ಸಮಸ್ಯೆ ಆಲಿಸಿದ ಅವರು, ಉದ್ಯೋಗ ಕೊಡಿಸಲು ಪ್ರಯತ್ನಿಸುತ್ತೇನೆ. ಇಲ್ಲವೇ ಸ್ವಂತವಾಗಿ ಉದ್ಯೋಗ ಕೈಗೊಳ್ಳಲು ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಪಟ್ಲು ಗ್ರಾಮದಲ್ಲಿ ನಡೆದ ಸಭೆಯಲ್ಲಿ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಸುಕನ್ಯ ಅವರು, ಸ್ಮಶಾನ ಜಾಗವನ್ನು ಒತ್ತುವರಿ ಮಾಡಲಾಗಿದ್ದು ಸರ್ವೆ ಮಾಡಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿ ಎಂದು ಮನವಿ ಮಾಡಿದರು. ತಹಶೀಲ್ದಾರ್ ಸುದರ್ಶನ್ ಅವರಿಗೆ ಕ್ರಮ ಕೈಗೊಳ್ಳುವಂತೆ ಕುಮಾರಸ್ವಾಮಿ ಆದೇಶ ನೀಡಿದರು.
ಮಾಸಾಶನ ಬಗ್ಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಜೆಡಿಎಸ್ ಹಿರಿಯ ಮುಖಂಡ ಹಾಪ್ ಕಾಮ್ಸ್ ದೇವರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡ ವಡ್ಡರಹಳ್ಳಿ ರಾಜಣ್ಣ ಇದ್ದರು.