ರಾಮನಗರ: ಕೆರೆಯಲ್ಲಿ ಈಜಲು ತೆರಳಿದ್ದ ಆರೋಗ್ಯ ನಿರೀಕ್ಷಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ಸಿಂಗ್ರಾಬೋವಿದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮಾಗಡಿಯ ಬೈಚಾಪುರ ಗ್ರಾಮದ ನಿವಾಸಿ ಶಂಕರ್ (32) ಮೃತರು. ಇವರು ಸದ್ಯ ಬಿಡದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಕರಣದ ಸಂಬಂಧ ಅವರ ಮೂವರು ಸ್ನೇಹಿತರನ್ನು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದದ್ದೇನು?: ಶಂಕರ್ ತಮ್ಮ ಮೂವರು ಸ್ನೇಹಿತರ ಜೊತೆಗೂಡಿ ಬುಧವಾರ ಮಧ್ಯಾಹ್ನ ಸಿಂಗ್ರಾಬೋವಿದೊಡ್ಡಿ ಕೆರೆಯ ಸಮೀಪ ಮದ್ಯ ಸೇವಿಸಿದ್ದರು. ಕುಡಿತದ ಮತ್ತಿನಲ್ಲಿ ನಾಲ್ವರು ಈಜಲೆಂದು ಕೆರೆಗೆ ಇಳಿದಿದ್ದರು. ಈ ಸಂದರ್ಭ ಶಂಕರ್ ಕಾಲಿಗೆ ಗಿಡ ಸಿಲುಕಿಕೊಂಡಿದ್ದು ಅವರು ನೀರಿನಲ್ಲಿಯೇ ಮುಳುಗಿ ಮೃತಪಟ್ಟರು. ಉಳಿದ ಮೂವರು ಮದ್ಯದ ನಶೆಯಲ್ಲಿದ್ದ ಕಾರಣ ಸ್ನೇಹಿತನ ರಕ್ಷಣೆಗೆ ಮುಂದಾಗಲಿಲ್ಲ ಎನ್ನಲಾಗಿದೆ.
ಬುಧವಾರ ಸಂಜೆಯೇ ಶೋಧ ಕಾರ್ಯಾಚರಣೆ ಆರಂಭಗೊಂಡಿದ್ದು, ಗುರುವಾರ ಬೆಳಗ್ಗೆ ಕೆರೆಯಲ್ಲಿ ಶವವು ಪತ್ತೆಯಾಯಿತು. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಸಂಬಂಧಿಕರಿಗೆ ಒಪ್ಪಿಸಲಾಯಿತು. ಆಸ್ಪತ್ರೆಯ ಬಳಿ ಕುಟುಂಬದವರ ರೋಧನ ಮುಗಿಲು ಮುಟ್ಟುವಂತಿತ್ತು.