ರಾಮನಗರ: ನಗರ ಹಾಗೂ ಸುತ್ತಮುತ್ತ ಶುಕ್ರವಾರ ಸಂಜೆ ಸುರಿದ ಮಳೆಗೆ ಅಲ್ಲಲ್ಲಿ ಮರಗಳು ಉರುಳಿಬಿದ್ದಿದ್ದು, ಮಾವಿನ ಬೆಳೆಗೂ ಹಾನಿಯಾಗಿದೆ.
ಜೋರು ಗಾಳಿ ಸಮೇತ ಬಿದ್ದ ಮಳೆಯಿಂದಾಗಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿರುವ ರೇಷ್ಮೆ ಇಲಾಖೆ ಕಟ್ಟಡದ ಮುಂಭಾಗ ಭಾರಿ ಮರವೊಂದು ಹೆದ್ದಾರಿಗೆ ಉರುಳಿಬಿತ್ತು. ಇದರಿಂದಾಗಿ ಸಂಚಾರಕ್ಕೆ ಅಡ್ಡಿಯಾಯಿತು. ಮರ ಕಡಿದು ತೆರವುಗೊಳಿಸಲಾಯಿತು. ಚಾಮುಂಡಿಪುರ ಬಡಾವಣೆ ಮೊದಲಾದ ಕಡೆಯೂ ಮರಗಳು ನೆಲಕ್ಕೆ ಉದುರಿದ್ದವು.
ಬಿರುಗಾಳಿಯಿಂದಾಗಿ ಸಾಕಷ್ಟು ಕಡೆ ಮಾವಿನ ಕಾಯಿ ನೆಲಕ್ಕೆ ಉದುರಿದ್ದು, ರೈತರಿಗೆ ನಷ್ಟವಾಗಿದೆ. ಮಾವಿನ ತೋಟಗಳಲ್ಲಿ ಮರಗಳ ಕಳಗೆ ಕಾಯಿ ಉದುರಿದ ದೃಶ್ಯ ಸಾಮಾನ್ಯವಾಗಿದ್ದು, ರೈತರು ತರಾತುರಿಯಲ್ಲಿ ಕೊಯ್ಲಿಗೆ ಮುಂದಾಗುವ ಸಾಧ್ಯತೆ ಇದೆ.
ಶನಿವಾರ ಬೆಳಿಗ್ಗೆ ಸಾಕಷ್ಟು ಹೊಲಗಳಲ್ಲಿ ನೀರು ನಿಂತಿತ್ತು. ಅನೇಕ ಜಮೀನುಗಳು ಕೆಸರು ಗದ್ದೆಗಳಾಗಿದ್ದವು. ತಗ್ಗು ಪ್ರದೇಶಗಳಲ್ಲಿ ನೀರು ಆವರಿಸಿಕೊಂಡಿತ್ತು.ರಾಮನಗರದ ಕೆಲವೆಡೆ ಸುಮಾರು 55 ಮಿಲಿಮೀಟರ್ನಷ್ಟು ಮಳೆ ಸುರಿದಿದೆ. ಸತತ ಮಳೆಯಿಂದಾಗಿ ಕೃಷಿ ಕಾರ್ಯಕ್ಕೆ ಹೆಚ್ಚು ಅನುಕೂಲ ಆಗಿದೆ. ಮುಂಗಾರು ಪೂರ್ವ ಬಿತ್ತನೆಯು ಚುರುಕುಗೊಳ್ಳುವ ನಿರೀಕ್ಷೆ ಇದೆ.