ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಕಂಚುಗಾರನಹಳ್ಳಿ ಮತ್ತು ತಾಯಪ್ಪನದೊಡ್ಡಿ ಗ್ರಾಮಗಳ ನಡುವಿನ ರಸ್ತೆಯು ಕೆಸರು ಗುಂಡಿಯಾಗಿದ್ದು, ಹದಗೆಟ್ಟ ಹಾದಿಯಲ್ಲೇ ಜನರು ಸಂಚಾರಕ್ಕೆ ಸರ್ಕಸ್ ನಡೆಸುವಂತೆ ಆಗಿದೆ.
ಈಚೆಗೆ ಸುರಿದ ಮಳೆಯಿಂದಾಗಿ ಇಡೀ ರಸ್ತೆ ಪೂರ್ತಿಕೆಸರುಮಯವಾಗಿದೆ. ಜನರು ನಡೆದಾಡಲೂ ಆಗದಂತಹ ಪರಿಸ್ಥಿತಿ ಇದೆ. ಬೈಕ್ ಸವಾರರು ಜಾರಿ ಬೀಳತೊಡಗಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ. ರಸ್ತೆ ಅವ್ಯವಸ್ಥೆಯಿಂದ ಎರಡು ಗ್ರಾಮಗಳ ನಡುವಿನ ಬಸ್ ಸಂಚಾರವೂ ಸ್ಥಗಿತಗೊಂಡಿದೆ ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ.
ರಸ್ತೆ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಇಲ್ಲಿನ ಜನರು ಮಾಗಡಿ ಶಾಸಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದಾರೆ. ಆದರೂ, ಸದ್ಯಕ್ಕೆ ಸಮಸ್ಯೆ ಬಗೆಹರಿದಿಲ್ಲ.
ನರೇಗಾ ಸೇರಿದಂತೆ ಸರ್ಕಾರದ ಯಾವುದಾದರೂ ಯೋಜನೆ ಅಡಿ ಈ ಎರಡು ಗ್ರಾಮಗಳ ನಡುವಿನ ರಸ್ತೆಯನ್ನು ಅಭಿವೃದ್ಧಿಪಡಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಈ ಭಾಗದ ಜನರ ಆಗ್ರಹವಾಗಿದೆ.