ರಾಮನಗರ: ಇಂದಿನಿಂದ ಆರಂಭ ಆಗಿರುವ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ, ಶೇ 40 ಕಮಿಷನ್ ಹಾಗೂ ಸರ್ಕಾರದ ವೈಫಲ್ಯದ ಕುರಿತು ಪ್ರಸ್ತಾಪ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಚನ್ನಪಟ್ಟಣದಲ್ಲಿ ಸೋಮವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ರಾಮನಗರ ಎಸ್.ಪಿ.ಗೆ ಕುಮಾರಸ್ವಾಮಿ ಕ್ಲಾಸ್ ತೆಗೆದುಕೊಂಡ ಬಗ್ಗೆ ಪ್ರತಿಕ್ರಿಯಿಸಿ ' ಹೊಸ ಎಸ್.ಪಿ. ಯಾರು ಬಂದಿದ್ದಾರೆ ಎಂಬುದೇ ನನಗೆ ಗೊತ್ತಿಲ್ಲ. ನಾನು ಸಂಪರ್ಕಿಸಿಲ್ಲ. ಯಾವ ಪಕ್ಷದ ಪರವಾಗಿಯೂ ಅವರು ಕೆಲಸ ಮಾಡುವುದು ಬೇಡ. ಕಾನೂನಿನ ಪ್ರಕಾರ ಕೆಲಸ ಮಾಡಿದರೆ ಸಾಕು' ಎಂದರು.
'ದೇವೇಗೌಡರು ರಾಜ್ಯದಲ್ಲಿ ಮುಂದೆ ಸಮ್ಮಿಶ್ರ ಸರ್ಕಾರ ಬರುತ್ತದೆ ಎಂದಿದ್ದಾರೆ. ಬೊಮ್ಮಾಯಿ ಮತ್ತು ಯಡಿಯೂರಪ್ಪ ಬಿಜೆಪಿಗೆ 150 ಸೀಟು ಸಿಗುತ್ತದೆ ಎನ್ನುತ್ತಾರೆ. ಕುಮಾರಸ್ವಾಮಿ ತಮಗೇ ಬಹುಮತ ಬರುತ್ತದೆ ಎನ್ನುತ್ತಾರೆ. ಆದರೆ ಎಲ್ಲವನ್ನೂ ಕಾಲವೇ ತೀರ್ಮಾನ ಮಾಡಲಿದೆ' ಎಂದರು.
' ನಾನು ರಾಮನಗರದಿಂದ ಸ್ಪರ್ಧಿಸುತ್ತೇನೆ ಎಂಬುದೆಲ್ಲ ಸುಳ್ಳು. ಸದ್ಯಕ್ಕೆ ನನ್ನನ್ನು ಕನಕಪುರದ ಜನ ಆರಿಸಿ, ಪ್ರೀತಿ ತೋರಿದ್ದಾರೆ. ಮುಂದೆ ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ' ಎಂದು ಸ್ಪಷ್ಟನೆ ನೀಡಿದರು.