ಕನಕಪುರ: ಗ್ರಾಮ ಪಂಚಾಯಿತಿ ಮೂಲೆ ನಿವೇಶನಗಳಲ್ಲಿ ಅಕ್ರಮ ನಡೆದಿದೆ. ಪಂಚಾಯಿತಿಯಿಂದಲೇ ಖಾತೆ ಮಾಡಿಕೊಡಲಾಗಿದೆ ಎಂದು ಸದಸ್ಯರು ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಚೀಲೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಶೋಭಾ ಸಿದ್ದಪ್ಪ ಅವರ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ದಯಾನಂದ ಸಾಗರ ಮೆಡಿಕಲ್ ಕಾಲೇಜು ಸಮೀಪದ ಎಬಿಎಂ ಲೇಔಟ್ನಲ್ಲಿ ಪಂಚಾಯಿತಿಗೆ ಎಂದು ಮೀಸಲಿಟ್ಟಿದ್ದ 7ನಿವೇಶನಗಳಲ್ಲಿ 153 ಮತ್ತು 154ನಂಬರ್ನ ನಿವೇಶನ ಖಾತೆ ಸಂಬಂಧ ಅಕ್ರಮ ನಡೆದಿದೆ ಇದಕ್ಕೆ ಉತ್ತರಿಸುವಂತೆ ಆಗ್ರಹಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಯಾನಂದ ಸಾಗರ್ ಮಾತನಾಡಿ, ನಿವೇಶನಗಳ ಮಾರಾಟವಾಗಲಿ ಅಥವಾ ಅದರ ಖಾತೆ ವರ್ಗಾವಣೆ ಮಾಡಿರುವ ವಿಚಾರ ಗಮನಕ್ಕೆ ಬಂದಿಲ್ಲ. ಪಂಚಾಯಿತಿ ಲೆಕ್ಕ ಸಹಾಯಕರು ಈ ಶಾಖೆ ಕಾರ್ಯ ನಿರ್ವಹಿಸಿದ್ದು ಖಾತೆ ವರ್ಗಾವಣೆ ಮಾಡಿದ್ದಾರೆ. ನಿವೇಶನ ಖಾತೆ ಬದಲಾವಣೆ ಕುರಿತು ಆಗಿರುವ ಲೋಪದೋಷಕ್ಕೆ ಸಂಬಂಧಪಟ್ಟಂತೆ ಇಒ ಮತ್ತು ಸಿಇಒಗೆ ದೂರು ನೀಡಲಾಗುವುದೆಂದು ಹೇಳಿದರು.
ಪಂಚಾಯಿತಿಯಲ್ಲಿ ಸರಿಯಾಗಿ ಕಂದಾಯ ವಸೂಲಿ ಆಗುತ್ತಿಲ್ಲ. ಪಿಡಿಒ ಪಂಚಾಯಿತಿಗೆ ಸರಿಯಾಗಿ ಬರುತ್ತಿಲ್ಲ. ಕುಂದುಕೊರತೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸದಸ್ಯರು ದೂರಿದರು.
14ನೇ ಹಣಕಾಸು ಯೋಜನೆಯಡಿ ಪಂಚಾಯಿತಿಗೆ ಬಂದಿರುವ ₹26ಲಕ್ಷ ಎಲ್ಲ ಗ್ರಾಮದ ಸದಸ್ಯರಿಗೂ ಹಂಚಿಕೆ ಮಾಡಿ ಆಯಾ ಗ್ರಾಮಗಳ ಅಭಿವೃದ್ಧಿಗೆ ಬಳಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪಂಚಾಯಿತಿ ಉಪಾಧ್ಯಕ್ಷ ಗಿರಿಯಪ್ಪ, ಕಾರ್ಯದರ್ಶಿ ಶಿಲ್ಪ, ಲೆಕ್ಕಸಹಾಯಕ ಶಿವರುದ್ರ ಇದ್ದರು.