ಕನಕಪುರ: ‘ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಿದೆ. ನಾಗರಿಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದಾಗ ಸಮಾಜ ತನ್ನಿಂದ ತಾನೆ ಸರಿಹೋಗುತ್ತದೆ’ ಎಂದು ಡಿವೈಎಸ್ಪಿ ರಮೇಶ್ ತಿಳಿಸಿದರು.
ಇಲ್ಲಿನ ರೋಟರಿ ಭವನದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ನೂತನ ತಾಲ್ಲೂಕು ಘಟಕ ರಚನೆ ಹಾಗೂ ತಾಲ್ಲೂಕು ಅಧ್ಯಕ್ಷರ ನೇಮಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಉತ್ತಮ ಪರಿಸರ, ಗಾಳಿ, ಶುದ್ಧ ನೀರು ಎಲ್ಲವೂ ಚೆನ್ನಾಗಿದ್ದಾಗ ಮಾತ್ರ ಪ್ರಕೃತಿ ಚೆನ್ನಾಗಿರಲು ಸಾಧ್ಯ. ಇದನ್ನು ಕೇವಲ ಕಲ್ಪನೆ ಮಾಡಿಕೊಂಡರೆ ಸಾಲದು. ಅದನ್ನು ಕಾರ್ಯಗತಗೊಳಿಸಬೇಕು. ಎಲ್ಲರೂ ಪರಿಸರ ಸ್ನೇಹಿಯಾಗಿ ಕೆಲಸ ಮಾಡಬೇಕು. ಗಿಡ ಬೆಳೆಸಬೇಕು. ಪರಿಸರ ಮಲಿನವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆಯು ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಕೆಲಸ ಮಾಡುತ್ತಿದೆ. ತಪ್ಪು ಮಾಡುವವರು ಮಾತ್ರ ಪೊಲೀಸರಿಗೆ ಹೆದರಬೇಕು. ಇಲಾಖೆಯು ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಪೊಲೀಸರ ಮೇಲಿರುವ ಭಯವನ್ನು ಬಿಟ್ಟು ಗೌರವವನ್ನಿಡಬೇಕೆಂದು ಸಲಹೆ ನೀಡಿದರು.
ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಆರ್. ಚಂದ್ರಪ್ಪ ಮಾತನಾಡಿದರು.
ನೂತನ ಅಧ್ಯಕ್ಷ ಸಿ.ಆರ್. ರಾಜೇಂದ್ರ ಮಾತನಾಡಿದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ಎನ್. ಜಗದೀಶ್, ಸಲಹೆಗಾರ ಕುಮಾರಸ್ವಾಮಿ, ಜಿಲ್ಲಾ ಅಧ್ಯಕ್ಷ ಆರ್. ರಾಮಚಂದ್ರ, ಸಂಘಟನೆಯ ಮುಖಂಡರಾದ ಕೆ.ವಿ. ಆನಂದ, ಮಹಾಲಿಂಗು, ಸುರೇಂದ್ರ, ಲೋಹಿತ್, ನವೀನ್, ಚಂದ್ರಮೌಳಿ, ಗುರು, ಸುನೀಲ್, ಕಾಳಪ್ಪ ಹಾಜರಿದ್ದರು.