ಚನ್ನಪಟ್ಟಣ: ‘ಸಾಮಾಜಿಕ ನಾಟಕಗಳಲ್ಲಿ ಬರುವ ಸಂದೇಶವನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು’ ಎಂದು ವಕೀಲ ಮೆಣಸಗೆರೆ ಬೊಮ್ಮೆಗೌಡ ಕಿವಿಮಾತು ಹೇಳಿದರು.
ತಾಲ್ಲೂಕಿನ ನೇರಳೂರು ಗ್ರಾಮದಲ್ಲಿ ಮಂಗಳವಾರ ನೃಪತುಂಗ ಕನ್ನಡ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ 'ಜೋಡೆತ್ತುಗಳ ಆರ್ಭಟ' ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಸಾಮಾಜಿಕ ನಾಟಕಗಳಲ್ಲಿ ಸಂದೇಶದ ಸಾರವೆ ಅಡಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಕಾಶ್ ನೇರಳೂರು ಮಾತನಾಡಿ, ‘ಸಮಾಜದಲ್ಲಿರುವ ಹಲವಾರು ಅಂಕಡೊಂಕುಗಳನ್ನು ತಿಳಿಸಿಕೊಡುವ ಸಾಮಾಜಿಕ ನಾಟಕಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಸಾಮಾಜಿಕ ನಾಟಕಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು’ ಎಂದರು.
\ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಎಸ್. ಶಿವಪ್ರಕಾಶ್, ಕಾಂತರಾಜು ಹಾಗೂ ನೃಪತುಂಗ ಕನ್ನಡ ಸೇವಾ ಸಂಘದ ಗೌರವಾಧ್ಯಕ್ಷ ಪಿ.ಸುರೇಶ್ ಭಾಗವಹಿಸಿದ್ದರು.
ನಾಟಕ ನಿರ್ದೇಶಕ ಗೆಜ್ಜಲಗೆರೆ ಚಂದ್ರಶೇಖರ್ ರವರ ನೇತೃತ್ವದಲ್ಲಿ ನಾಟಕ ಪ್ರದರ್ಶನಗೊಂಡಿತು. ರಾಜೇಂದ್ರ ಮಂಡ್ಯ ಅವರು ಸಂಗೀತ ನೀಡಿದರು. ಮಲ್ಲೇಶ್ ನೇರಳೂರು ಪ್ರಾಕ್ಟೀಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದರು.
ಜೋಡೆತ್ತುಗಳ ಪಾತ್ರದಲ್ಲಿ ಶ್ರೀನಿವಾಸ ಮತ್ತು ನವೀನ್ ಕುಮಾರ್, ಕಥಾ ನಾಯಕರಾಗಿ ಲಿಂಗರಾಜು, ಮಧುಕುಮಾರ್ ಹಾಗೂ ಸಿದ್ದರಾಜು, ಇನ್ಸ್ಪೆಕ್ಟರ್ ಪಾತ್ರದಲ್ಲಿ ಎನ್.ಕೆ.ಯೋಗೇಶ್, ಕಾಮಿಡಿ ಪಾತ್ರದಲ್ಲಿ ರಾಮು, ಪ್ರಕಾಶ್, ಲೋಕೇಶ್ ಹಾಗೂ ಸ್ತ್ರೀ ಪಾತ್ರದಲ್ಲಿ ಮಮತ, ಚೈತ್ರ, ಪ್ರಿಯಾಂಕ, ಭವ್ಯ ಅಭಿನಯಿಸಿದರು.