ಬರಡನಹಳ್ಳಿ ಕೃಷ್ಣಮೂರ್ತಿ
ಕನಕಪುರ: ಎಂಟನೇ ಬಾರಿ ಕನಕಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ಎಂಟು ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಿದ್ದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ದೊಡ್ಡ ಮಟ್ಟದ ಹೋರಾಟ ನಡೆಸಿ ಇಡೀ ರಾಜ್ಯದ ಗಮನ ಸೆಳೆದಿದ್ದರು.
ಇಂದು ಅವರದೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಆಗಲು ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಕ್ಷೇತ್ರದ ಜನರ ನಿರೀಕ್ಷೆ ಬೆಟ್ಟದಷ್ಟಿವೆ. ತಾಲ್ಲೂಕಿನ ಎರಡು ಪ್ರಮುಖ ಬೇಡಿಕೆಗಳಾದ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಮೇಕೆದಾಟು ಯೋಜನೆ ಜಾರಿ ಮೊದಲು ಆಗಬೇಕು ಎನ್ನುವುದು ತಾಲೂಕಿನ ಜನತೆಯ ಒತ್ತಾಸೆಯಾಗಿದೆ.
ಕನಕಪುರವು ಬೆಂಗಳೂರಿನಿಂದ 50 ಕಿಲೋಮೀಟರ್ ದೂರದಲ್ಲಿದ್ದರೂ ಶಿಕ್ಷಣ, ಉದ್ಯೋಗ ಮತ್ತು ಕೈಗಾರಿಕಾ ವಲಯದಲ್ಲಿ ತೀರಾ ಹಿಂದುಳಿದಿಎ. ಏಷ್ಯದಲ್ಲೇ ಅತಿದೊಡ್ಡ ಕೈಗಾರಿಕಾ ಪ್ರದೇಶ ಪಕ್ಕದ ಹಾರೋಹಳ್ಳಿ ತಾಲ್ಲೂಕಿನಲ್ಲಿದೆ. ಅದೇ ರೀತಿ ಕೈಗಾರಿಕಾ ಪ್ರದೇಶ ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ನಾಂದಿ ಹಾಡಲಿ ಎನ್ನುವುದು ಕ್ಷೇತ್ರದ ಜನರ ಬೇಡಿಕೆಯಾಗಿದೆ. ತಾಲ್ಲೂಕಿನಲ್ಲಿ ರೇಷ್ಮೆ ಮತ್ತು ಹೈನುಗಾರಿಕೆ ಪ್ರಮುಖ ವಾಣಿಜ್ಯ ಕಸುಬುಗಳಾಗಿವೆ. ಇಲ್ಲಿ ತರಕಾರಿ ಮತ್ತು ಹೂವಿನ ಬೆಳೆಗೆ ಹೆಚ್ಚು ಪ್ರೋತ್ಸಾಹ ಮತ್ತು ಮಾರುಕಟ್ಟೆ ಇಲ್ಲ. ತಾಲ್ಲೂಕಿಗೆ ಆದಾಯ ತರುವಂತ ಯಾವುದೆ ಯೋಜನೆಗಳಿಲ್ಲ. ಅದಕ್ಕಾಗಿ ಶಿವಕುಮಾರ್ ಪ್ರವಾಸ ಉದ್ಯಮಕ್ಕೆ ಹೆಚ್ಚಿನ ಒತ್ತು ಕೊಡಬೇಕಿದೆ ಎನ್ನುತ್ತಾರೆ ಸ್ಥಳೀಯರು.
ಚುಂಚಿಪಾಲ್ಸ್, ಮೇಕೆದಾಟು, ಕಾವೇರಿ ಕ್ಯಾಂಪ್, ಮಾವತ್ತೂರು ಕೆರೆಯನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಿದರೆ ಬೆಂಗಳೂರಿನಿಂದ ಪ್ರವಾಸಿಗರು ಆಗಮಿಸುತ್ತಾರೆ. ಆಗ ಸಹಜವಾಗಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ.
ಬೆಂಗಳೂರು ಹತ್ತಿರದಲ್ಲಿ ಇರುವುದರಿಂದ ಸಾವಿರಾರು ಜನ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುತ್ತಾರೆ. ಪಕ್ಕದಲ್ಲಿಯೇ ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಇರುವುದರಿಂದ ಕನಕಪುರದವರೆಗೂ ಮೆಟ್ರೋ ರೈಲ್ ವ್ಯವಸ್ಥೆ ಮಾಡಬೇಕಿದೆ ಎನ್ನುತ್ತಾರೆ ಕ್ಷೇತ್ರದ ಜನರು.
ಚುನಾವಣೆ ಸಂದರ್ಭದಲ್ಲಿ ಶಿವಕುಮಾರ್ ಕನಕಪುರ ತಾಲೂಕನ್ನು ಮಾದರಿ ತಾಲ್ಲೂಕಾಗಿ ಮಾಡುವುದಾಗಿ ವಾಗ್ದಾನ ನೀಡಿದ್ದರು. ಅದರಂತೆ ಅವರು ತಾಲ್ಲೂಕಿನಲ್ಲಿ ಯಾವಾವ ಅಭಿವೃದ್ಧಿ ಕೆಲಸಗಳು ಆಗಬೇಕು ಎನ್ನುವುದನ್ನು ಪಟ್ಟಿ ಮಾಡಿ ಯೋಜನಾ ಬದ್ಧವಾಗಿ ಜಾರಿಗೊಳಿಸಬೇಕು ಎನ್ನುವುದು ತಾಲ್ಲೂಕಿನ ಜನತೆಯ ಆಸೆಯಾಗಿದೆ.
ಮೆಡಿಕಲ್ ಕಾಲೇಜು ಸ್ಥಾಪನೆಯಾಗಲಿ
ಕನಕಪುರ ತಾಲ್ಲೂಕಿನಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಎಲ್ಲದಕ್ಕೂ ಬೆಂಗಳೂರಿಗೆ ಹೋಗಬೇಕು. ಕನಕಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವುದಾಗಿ ಡಿ.ಕೆ. ಶಿವಕುಮಾರ್ ಚುನಾವಣೆ ಸಂದರ್ಭದಲ್ಲಿ ವಾಗ್ದಾನ ಮಾಡಿದ್ದರು. ಈ ಬಾರಿ ತಾಲ್ಲೂಕಿನ ಜನತೆಗಾಗಿ ಅವರು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಿ
ಕಬ್ಬಾಳೇಗೌಡ, ಉಪನ್ಯಾಸಕ, ಕನಕಪುರ.
ಮೇಕೆದಾಟು ಜಲಾಶಯ ನಿರ್ಮಾಣ ಆಗಲಿ
ಕನಕಪುರ ಸೇರಿದಂತೆ ಬಯಲು ಸೀಮೆಯ ಎಂಟು ತಾಲ್ಲೂಕುಗಳಿಗೆ ನೀರಾವರಿ ಒದಗಿಸುವ ತಾಲ್ಲೂಕಿನ ಮಹತ್ವಾ ಕಾಂಕ್ಷೆಯ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಬೇಕು. ಮೇಕೆದಾಟು ಜಲಾಶಯ ನಿರ್ಮಾಣ ಮಾಡಬೇಕು. ಬೆಂಗಳೂರಿಗೆ ಹತ್ತಿರ ಇರುವುದರಿಂದ ಕನಕಪುರವರೆಗೂ ಮೆಟ್ರೊ ರೈಲು ವಿಸ್ತರಿಸಬೇಕು. ತಾಲ್ಲೂಕಿನಲ್ಲಿ ಉದ್ಯೋಗ ಸೃಷ್ಟಿಸಲು ಕೈಗಾರಿಕೆ ಪ್ರಾರಂಭಿಸಬೇಕು. ಇವೆಲ್ಲವನ್ನು ಡಿ.ಕೆ. ಶಿವಕುಮಾರ್ ಅವರಿಂದ ಜನರು ನಿರೀಕ್ಷಿಸುತ್ತಿದ್ದಾರೆ. ಖಂಡಿತ ಅವರು ನೆರವೇರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ.
ಶ್ರೀಕಾಂತ, ದೊಡ್ಡಾಲಹಳ್ಳಿ
lಮೇಕೆದಾಟು ಜಲಾಶಯ
lಸರ್ಕಾರಿ ಮೆಡಿಕಲ್ ಕಾಲೇಜು
lಉನ್ನತ ಶಿಕ್ಷಣಕ್ಕಾಗಿ
lಸರ್ಕಾರಿ ಕಾಲೇಜು
lಪ್ರವಾಸಿ ತಾಣಗಳ ಅಭಿವೃದ್ಧಿ
lಕೈಗಾರಿಕಾ ಪ್ರದೇಶ ಅಭಿವೃದ್ಧಿ
lಸರ್ಕಾರಿ ಕೋಚಿಂಗ್ ಸೆಂಟರ್
lಪ್ರತಿ ಗ್ರಾಮಕ್ಕೂ ಸ್ಮಶಾನ ಜಾಗ
lಕನಕಪುರಕ್ಕೆ ಮೆಟ್ರೊ ರೈಲು
lಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.