ರಾಮನಗರ: ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಬುಧವಾರ ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಒಂದು ಗಂಟೆಗೂ ಹೆಚ್ಚು ಕಾಲ ಮಾರುಕಟ್ಟೆ ಸುತ್ತಾಡಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಬೆಳೆಗಾರರ ಸಮಸ್ಯೆ ಆಲಿಸಿದರು. ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು. ತೂಕ ಹಾಕುವ ಬುಟ್ಟಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ರೈತರು ಆಗ್ರಹಿಸಿದರು. ಇ-ಪೇಮೆಂಟ್ ನಿಲ್ಲಿಸಲಾಗಿದೆ. ಇದನ್ನು ತಕ್ಷಣವೇ ಇದನ್ನು ಆರಂಭಿಸಬೇಕು. ನಿತ್ಯ ಮಾರುಕಟ್ಟೆಗೆ ಕನಿಷ್ಠ 35 ಟನ್ ಗೂಡು ರಾಜ್ಯದ ಮೂಲೆ ಮೂಲೆಗಳಿಂದಲೂ ಆಗಮಿಸುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಹಾಗಾಗಿ ಹೈಟೆಕ್ ಮಾರುಕಟ್ಟೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ರೇಷ್ಮೆ ಮಾರುಕಟ್ಟೆಯ ಸಲಹಾ ಸಮಿತಿ ಸದಸ್ಯ ರವಿ ಮಾತನಾಡಿ, ‘ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಸಚಿವರ ಸಭೆಯಲ್ಲಿಯೂ ಕಾರ್ಯದರ್ಶಿಗಳು ಹಾಜರಿದ್ದರು. ಮಾರುಕಟ್ಟೆಯಲ್ಲಿ ಆಗಬೇಕಾಗಿರುವ ಕೆಲಸಗಳು ಶೀಘ್ರವೇ ನಡೆಯಲಿ. ಆ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಹೇಳಿದರು.
ಎಲ್ಲರ ಮನವಿಯನ್ನು ಆಲಿಸಿದ ಕಟಾರಿಯಾ ‘ಅವ್ಯವಸ್ಥೆ ಸರಿಪಡಿಸಲಾಗುತ್ತದೆ. ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಲು ಸ್ಥಳ ವೀಕ್ಷಣೆಗೆ ಬಂದಿದ್ದೇನೆ’ ಎಂದರು.
ರೇಷ್ಮೆ ಇಲಾಖೆ ಆಯುಕ್ತೆ ಶೈಲಜಾ, ಜಂಟಿ ನಿರ್ದೇಶಕ ಕುಮಾರ್, ರೇಷ್ಮೆ ಇಲಾಖೆಯ ಉಪನಿರ್ದೇಶಕ ಮಹೇಂದ್ರ ಕುಮಾರ್, ಮಾರುಕಟ್ಟೆ ಉಪನಿರ್ದೇಶಕ ಮುನ್ಷಿಬಸಯ್ಯ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ್ ಇದ್ದರು.
ಬಳಿಕ ಕಟಾರಿಯಾ ರಾಮನಗರದ ಪ್ರಾದೇಶಿಕ ಸಾರಿಗೆ ಕಚೇರಿ, ಚನ್ನಪಟ್ಟಣ ಪಿಟಿಎಸ್ ಬಳಿಯ ರೇಷ್ಮೆ ಫಾರಂ, ಕೆಎಸ್ಐಸಿ ಬಳಿ ಮಾರುಕಟ್ಟೆಗೆಗಾಗಿ ಸ್ಥಳ ಪರಿಶೀಲನೆ ನಡೆಸಿದರು.