ಮಾಗಡಿ: ಸಾವನದುರ್ಗ ಕೆಂಪೇಗೌಡ ವನಧಾಮ ಪುನಃಶ್ಚೇತನಗೊಳಿಸುವ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಯೋಜನೆ ರೂಪಿಸಲಾಗುವುದು ಎಂದು ಅರಣ್ಯ ಸಚಿವ ಅನಂದ್ಸಿಂಗ್ ತಿಳಿಸಿದರು.
ಸೋಲೂರು ಹೋಬಳಿ ಕೊತ್ತಗಾನಹಳ್ಳಿಗೆ ಭೇಟಿ ನೀಡಿದ ಅವರು, ಚಿರತೆ ದಾಳಿಯಿಂದ ಮೃತಪಟ್ಟ ಗಂಗಮ್ಮ ಅವರ ಪೋಷಕರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ₹10ಲಕ್ಷ ಪರಿಹಾರ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಿಂದಾಗಿ ₹7.5ಲಕ್ಷ ಪರಿಹಾರ ಮಂಜೂರು ಮಾಡಲಾಗಿದೆ. ಗ್ರಾಮದ ಜನರು ರಾತ್ರಿ ಸಮಯದಲ್ಲಿ ಬಬ್ಬಂಟಿಯಾಗಿ ಸಂಚಾರ ಮಾಡಬಾರದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.
ಶಾಸಕರಾದ ಡಾ.ಶ್ರೀನಿವಾಸಮೂರ್ತಿ, ಎ.ಮಂಜುನಾಥ, ಭೂಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಗಂಗರಾಜು, ಕೊತ್ತಗಾನಹಳ್ಳಿ ನಾಗರಾಜು, ಜಿ.ಪಂ.ಸದಸ್ಯೆ ನಾಜಿಯಾಖಾನಂ ಜವಾಹರ್, ಜಿ.ಪಂ.ಮಾಜಿ ಸದಸ್ಯ ಸಿ.ಆರ್.ಗೌಡ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.