ಉಯ್ಯಂಬಳ್ಳಿ (ಕನಕಪುರ): ‘ರೈತರು ಭೂಮಿಯಲ್ಲಿ ಬಿತ್ತಿದ ಬೀಜಗಳು ಬೆಳೆದು ಯಥೇಚ್ಛವಾಗಿ ಫಸಲು ಕೊಡಲಿ ಎಂದು ಹಾಗೂ ಭಕ್ತರ ತ್ರಿಕರಣ ಶುದ್ಧಿಗಾಗಿ ಗುರುವು ಭಕ್ತರ ಮನೆಗೆ ಬಂದು ಕೋರಣ್ಯ ಮಾಡಲಾಗುವುದು’ ಎಂದು ಮರಳೇಗವಿ ಮಠದ ಮುಮ್ಮಡಿ ಶಿವರುದ್ರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮರಳೇ ಗ್ರಾಮದಲ್ಲಿ ಗೌರಿ ಹಬ್ಬದ ಹಿನ್ನೆಲೆಯಲ್ಲಿ ಮರಳೇ ಮಠದಿಂದ ಹಮ್ಮಿಕೊಂಡಿದ್ದ ಕೋರಣ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಕ್ತರ ಮನಸ್ಸಿನಲ್ಲಿ ಧರ್ಮ ಜಾಗೃತಿಯನ್ನು ಮೂಡಿಸಲು ಧರ್ಮ ಪರಂಪರೆ ಕಾರ್ಯಕ್ರಮವನ್ನು ಮಠವು ಹಿಂದಿನಿಂದಲೂ ನಡೆಸಿಕೊಂಡು ಬಂದಿದೆ. ಅದನ್ನು ಮಠವು ಮುಂದುವರಿಸಿಕೊಂಡು ಬಂದಿದೆ ಎಂದರು.
ಮಠದ ಅವಿಭಾಜ್ಯ ಗ್ರಾಮಗಳಾದ ಮರಳೆ, ಕೂನೂರು, ಮರಳೇಬೇಕುಪ್ಪೆ, ಮಾದಪ್ಪನದೊಡ್ಡಿ, ಹುಲಿಬೆಲೆ, ಒರಳ್ಗಲ್, ತಾವರಗಟ್ಟೆ, ಚಿಕ್ಕೀಗೌಡನದೊಡ್ಡಿ, ಕರಿಯಣ್ಣನದೊಡ್ಡಿ ಮೊದಲಾದ ಗ್ರಾಮಗಳಲ್ಲಿ ಮಠದ ಶಿಷ್ಯರ ಜತೆಗೂಡಿ ಈ ಪವಿತ್ರವಾದ ಗುರು ಕೋರಣ್ಯ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದರು.
ಈ ದೇಶ ಸಂಪತ್ತಿನ ದೇಶವಾಗಿದೆ. ಧರ್ಮ ಜಾಗೃತಿಯ ಈ ಕೋರಣ್ಯವನ್ನು ಮೂರು ದಿನಗಳ ಕಾಲ ನಡೆಸಲಾಗುತ್ತದೆ ಎಂದರು.
ಗ್ರಾಮಗಳಲ್ಲಿ ಜನತೆ ತಮ್ಮ ಮನೆಗೆ ಗುರುಗಳು ಬಂದಾಗ, ದವಸ ಧಾನ್ಯ, ತರಕಾರಿ ಎಲ್ಲವನ್ನು ಕೊಟ್ಟು ಆಶೀರ್ವಾದ ಪಡೆದುಕೊಂಡರು.