ಕನಕಪುರ: ಇಲ್ಲಿನ ಶಿವನಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರಸ್ವಾಮಿಯ ಗೌರಿ ಹಬ್ಬದ ಕೊಂಡೋತ್ಸವವು ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಸೋಮವಾರ ಬೆಳಿಗ್ಗೆ 5 ಗಂಟೆಗೆ ಶ್ರೀ ವೀರಭದ್ರಸ್ವಾಮಿಗೆ ರುದ್ರಾಭಿಷೇಕ, ಅಕ್ಕಿಪೂಜೆ ನಡೆಯಿತು. ಯಳವಾರೋತ್ಸವ ಗ್ರಾಮದಲ್ಲಿ ಮಧ್ಯಾಹ್ನ 3 ಗಂಟೆಗೆ ಜರುಗಿತು.
ಮಂಗಳವಾರ ಬೆಳಿಗ್ಗೆ 4 ಗಂಟೆಗೆ ದೇವರಿಗೆ ರುದ್ರಾಭಿಷೇಕವಾಯಿತು. ಬ್ರಾಹ್ಮೀ ಮುಹೂರ್ತದಲ್ಲಿ 6 ಗಂಟೆಗೆ ಅಗ್ನಿಕೊಂಡೋತ್ಸವ ನಡೆಸಿ ವೀರಭದ್ರಸ್ವಾಮಿಯ ಮೆರವಣಿಗೆ ನಡೆಯಿತು. ಕಾಲೊನಿಯಲ್ಲಿ 8 ಗಂಟೆಗೆ ಕ್ಯಾತಮ್ಮನ ಉತ್ಸವ ನೆರವೇರಿತು.
ನಂತರ 9 ಗಂಟೆಗೆ ದೇಗುಲಮಠದ ಕಿರಿಯ ಶ್ರೀ ಚನ್ನಬಸವಸ್ವಾಮಿಗಳಿಂದ ಸಂಜೆ 4 ಗಂಟೆವರೆಗೂ ಗ್ರಾಮದ ಪ್ರತಿ ಮನೆಯಲ್ಲೂ ಗುರು ಕೋರಣ್ಯ ಭಿಕ್ಷಾ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಅರ್ಚಕ ರುದ್ರಣ್ಣ ವೀರಭದ್ರಸ್ವಾಮಿಯ ಅಗ್ನಿಕೊಂಡವನ್ನು ಪ್ರವೇಶಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು. ಶಿವನಹಳ್ಳಿ, ಗಡಸಹಳ್ಳಿ ಹಾಗೂ ಸುತ್ತಲಿನ ಗ್ರಾಮಸ್ಥರು ಕೊಂಡ ಪ್ರವೇಶಿಸುವುದನ್ನು ನೋಡಿ ಕಣ್ತುಂಬಿಕೊಂಡರು.