ಚನ್ನಪಟ್ಟಣ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ₹ 1 ಕೋಟಿ ವೆಚ್ಚದ ಮಾರುಕಟ್ಟೆ ಹರಾಜು ವೇದಿಕೆ ನಿರ್ಮಾಣ ಕಾಮಗಾರಿಗೆ ಎಪಿಎಂಸಿ ಅಧ್ಯಕ್ಷ ಯಾಲಕ್ಕಿಗೌಡ ಭೂಮಿ ಪೂಜೆ ನೆರವೇರಿಸಿದರು.
‘ಕೃಷಿ ಮಾರಾಟ ಇಲಾಖೆ ವತಿಯಿಂದ ಈ ಅನುದಾನ ಬಿಡುಗಡೆಯಾಗಿದ್ದು, ಮಾರುಕಟ್ಟೆಯ ಮುಖ್ಯ ಪ್ರಾಂಗಣದಲ್ಲಿ ಹೆಚ್ಚುವರಿಯಾಗಿ ನಾಲ್ಕು ಹರಾಜು ವೇದಿಕೆ ನಿರ್ಮಾಣ ಮಾಡಿ, ಮಾರುಕಟ್ಟೆ ಅಭಿವೃದ್ಧಿ ಪಡಿಸಿ, ರೈತರಿಗೆ ಮತ್ತು ವರ್ತಕರಿಗೆ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಅವರು ತಿಳಿಸಿದರು.
‘ಮಾರುಕಟ್ಟೆಯಲ್ಲಿ ರೈತರಿಗೆ ಹಾಗೂ ವರ್ತಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು, ಸರ್ಕಾರದಿಂದ ಅನುದಾನ ಪಡೆಯಲು ಮನವಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಬದ್ಧ’ ಎಂದು ಹೇಳಿದರು.
ಎಪಿಎಂಸಿ ಆಡಳಿತ ಮಂಡಳಿ ಉಪಾಧ್ಯಕ್ಷ ವೆಂಕಟಸ್ವಾಮಿ, ನಿರ್ದೇಶಕರಾದ ವಾಸಿಲ್ ಆಲಿಖಾನ್, ಸೀನಪ್ಪ, ಗೋವಿಂದರಾಜು, ಜೆ.ಕೆ.ಬೀರಪ್ಪ, ವೆಂಕಟೇಶ್, ಕಾರ್ಯದರ್ಶಿ ಶ್ರೀನಿವಾಸ್, ಎಇಇ ಶಿವರೆಡ್ಡಿ, ಎಇ ಸತೀಶ್ ಕುಮಾರ್, ಗುತ್ತಿಗೆದಾರ ಲೋಹಿತ್ ಇದ್ದರು.