ರಾಮನಗರ: ಮಾಗಡಿ ತಾಲ್ಲೂಕಿನ ಕೊತ್ತಗಾನಹಳ್ಳಿ ಗ್ರಾಮದಲ್ಲಿ ಮನೆಯ ಹೊರಗೆ ಮಲಗಿದ್ಧ ವೃದ್ಧೆ ಮೇಲೆ ಶುಕ್ರವಾರ ರಾತ್ರಿ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.
ಗಂಗಮ್ಮ (68) ಮೃತರು. ಚಿರತೆ ಮಹಿಳೆಯ ಶವವನ್ನು ಎಳೆದೊಯ್ದಿದ್ದು ಭಾಗಶಃ ತಿಂದು ಹಾಕಿದೆ. ದೇಹದ ಭಾಗಗಳು ಮನೆಯ ಸಮೀಪ ಅಲ್ಲಲ್ಲಿ ಬಿದ್ದಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಮಾಗಡಿ ಪೊಲೀಸರು ಭೇಟಿ ನೀಡಿದ್ದಾರೆ.
ಮಾಗಡಿ ತಾಲ್ಲೂಕಿನ ಕದರಯ್ಯನಪಾಳ್ಯದಲ್ಲಿ ಕಳೆದ ಶನಿವಾರ ಚಿರತೆಯೊಂದು ಮನೆಯೊಳಗೆ ನುಗ್ಗಿ ಮೂರು ವರ್ಷದ ಬಾಲಕನನ್ನು ಎಳೆದೊಯ್ದು ಕೊಂದು ಹಾಕಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ.