ಕನಕಪುರ: ಗ್ರಾಮಕ್ಕೆ ನುಗ್ಗಿ ಕುರಿ, ಕೋಳಿ, ಮೇಕೆಯನ್ನು ಹೊತ್ತೊಯ್ಯುತ್ತಿದ್ದ ಚಿರತೆಯನ್ನು ಸಾತನೂರು ಹೋಬಳಿ ವೆಂಕಟರಾಯನದೊಡ್ಡಿ ಸಮೀಪ ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.
ಸುಮಾರು 6 ವರ್ಷದ ಗಂಡು ಚಿರತೆ ಸೆರೆಯಾಗಿದೆ. ಒಂದು ತಿಂಗಳಿನಿಂದ ವೆಂಕಟರಾಯನದೊಡ್ಡಿ, ಕುರುಬಳ್ಳಿ ಮತ್ತು ಬುಕ್ಕಸಾಗರ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿತ್ತು.
ಸಾರ್ವಜನಿಕರ ಒತ್ತಡಕ್ಕೆ ಮಣಿದ ಅರಣ್ಯ ಅಧಿಕಾರಿಗಳು ಬುಕ್ಕಸಾಗರ ಮತ್ತು ವೆಂಕಟರಾಯನದೊಡ್ಡಿ ಮಧ್ಯದಲ್ಲಿನ ಕೋಳಿ ಫಾರಂ ಬಳಿ ಮೂರು ದಿನಗಳ ಹಿಂದೆ ಚಿರತೆಯನ್ನು ಸೆರೆಹಿಡಿಯಲು ಬೋನ್ ಇಟ್ಟಿದ್ದರು.
ಸೋಮವಾರ ಬೆಳಿಗ್ಗೆ ಬೋನಿನಲ್ಲಿದ್ದ ಪ್ರಾಣಿಯನ್ನು ತಿನ್ನಲು ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿತ್ತು. ಅರಣ್ಯ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುತ್ತತ್ತಿ ವಲಯ ಅರಣ್ಯದಲ್ಲಿನ ಹೈರಾ ಅರಣ್ಯಕ್ಕೆ ಸಂಜೆ ವೇಳೆಗೆ ಬಿಟ್ಟಿರುವುದಾಗಿ ತಿಳಿಸಿದ್ದಾರೆ.