ಚನ್ನಪಟ್ಟಣ: ತಾಂತ್ರಿಕ ಯುಗದಲ್ಲೂ ಸಾಂಸ್ಕೃತಿಕ ಕಲಾ ಪ್ರಕಾರಗಳು ಮರುಹುಟ್ಟು ಪಡೆಯುತ್ತಿರುವುದು ಸಂತಸ ವಿಷಯ ಎಂದು ಜಾನಪದ ಗಾಯಕ ಹೊನ್ನಿಗನಹಳ್ಳಿ ಬಿ.ಸಿದ್ದರಾಜಯ್ಯ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹರೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಗಾನಸುಧೆ ಸಾಂಸ್ಕೃತಿಕ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಮತ್ತು ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಸಾಂಸ್ಕೃತಿಕ ನೆಲೆಗಟ್ಟು ಜೀವನದಲ್ಲಿ ರೂಢಿಸಿಕೊಳ್ಳುವುದು ಬಹಳ ಅವಶ್ಯ. ಇಂತಹ ಕಲಾ ಸಂಸ್ಥೆಗಳು ಮಕ್ಕಳ ಬುದ್ಧಿವಂತಿಕೆ ಹೆಚ್ಚಿಸುವ ಸಲುವಾಗಿ ಕಾರ್ಯಕ್ರಮ ನಡೆಸುತ್ತಿರುವುದು ಸಂತೋಷದಾಯಕ ವಿಚಾರ ಎಂದರು.
ಗ್ರಾಮದ ಮುಖಂಡ ಶಿವಣ್ಣ ಮಾತನಾಡಿ, ತೆರೆಮರೆಯಲ್ಲಿರುವ ಕಲಾವಿದರಿಗೆ ಅವಕಾಶಗಳು ಲಭ್ಯವಾಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ನಾಗಮ್ಮ ಮಾತನಾಡಿ, ಶಾಲೆಗಳಲ್ಲಿ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿರುವ ಪ್ರತಿಭೆ ಹೊರ ಬರುತ್ತದೆ. ಸಂಘ– ಸಂಸ್ಥೆಗಳು ಇಂತಹ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡಲಿ ಎಂದರು.
ಗಾಯಕ ನೀಲಸಂದ್ರ ಸಿದ್ದರಾಮು, ಪ್ರಜಾ ಪರಿವರ್ತನೆ ವೇದಿಕೆ ಅಧ್ಯಕ್ಷ ಜಯಸಿಂಹ, ಶಿಕ್ಷಕರಾದ ಲಕ್ಷ್ಮಮ್ಮ, ಪವಿತ್ರ, ಸುಧಾ, ಶ್ರೀನಿವಾಸಮೂರ್ತಿ ಇದ್ದರು.
ಚಿತ್ರಕಲೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಾದ ಸತೀಶ್ ಪ್ರಥಮ, ಕಿರಣ್ ಕುಮಾರ್ ದ್ವಿತೀಯ, ಅನನ್ಯ ತೃತೀಯ ಬಹುಮಾನ ಪಡೆದರು. ಗಾಯಕರಾದ ಪ್ರಕಾಶ್ ಬಾಣಂತಹಳ್ಳಿ, ಚಕ್ಕರೆ ಸಿದ್ದರಾಜು ಜನಪದ ಗೀತಗಾಯನ ನಡೆಸಿಕೊಟ್ಟರು.