ಕನಕಪುರ: ‘ಕಪಾಲ ಅಂದರೆ ಹಿಂದೂ ಧರ್ಮದಲ್ಲಿ ಶಿವ ಅಂತಾ ಕರೆಯಲಾಗುತ್ತದೆ. ಕಪಾಲ ಬೆಟ್ಟವೆಂದರೆ ಇದು ನಿಜವಾಗಿಯು ಇಲ್ಲಿ ಶಿವ ಅಥವಾ ಮಹದೇಶ್ವರ ನೆಲೆಸಿರಬಹುದು. ಒಕ್ಕಲಿಗರ ನಾಯಕರಾದ ಡಿ.ಕೆ.ಶಿವಕುಮಾರ್ ಇಲ್ಲಿನ ಕಾಲಭೈರವೇಶ್ವರನ ಮೂರ್ತಿಯನ್ನು ನಿರ್ಮಿಸಲಿ’ ಎಂದು ರಿಷಿ ಕುಮಾರಸ್ವಾಮಿ ಹೇಳಿದರು.
ವಿವಾದದ ರೂಪ ಪಡೆದುಕೊಳ್ಳುತ್ತಿರುವ ಯೇಸು ಪ್ರತಿಮೆ ನಿರ್ಮಾಣದ ಕಪಾಲ ಬೆಟ್ಟಕ್ಕೆ ಭಕ್ತರೊಂದಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.
‘ಬೆಟ್ಟದಲ್ಲಿ 10 ಎಕರೆ ಜಾಗದಲ್ಲಿ 114 ಅಡಿ ಎತ್ತರದ ಯೇಸು ಪ್ರತಿಮೆ ನಿರ್ಮಾಣ ಮಾಡುತ್ತಿರುವುದು ಇಲ್ಲಿನ ಕ್ರೈಸ್ತ ಸಮುದಾಯದವರಿಗಾಗಿ ಅಲ್ಲ. ಸೋನಿಯಾ ಗಾಂಧಿಯವರನ್ನು ಮೆಚ್ಚಿಸಲು ಎನಿಸುತ್ತದೆ’ ಎಂದು ಆರೋಪಿಸಿದರು.
‘ಇಲ್ಲಿ ದೊಡ್ಡ ಪ್ರತಿಮೆ ನಿರ್ಮಾಣ ಮಾಡಿದರೆ ಇಡೀ ವಿಶ್ವವೇ ಇತ್ತಕಡೆ ತಿರುಗಿ ನೋಡುತ್ತದೆ. ಪ್ರಪಂಚದಲ್ಲಿನ ಎಲ್ಲ ಕ್ರಿಶ್ಚಿಯನ್ನರು ಇಲ್ಲಿಗೆ ಬಂದು ಹೋಗುತ್ತಾರೆ; ಇಲ್ಲಿಯೇ ನೆಲೆಸುತ್ತಾರೆ. ಹಿಂದೂ ಧರ್ಮ ನಾಶವಾಗುತ್ತದೆ. ನಿಧಾನವಾಗಿ ರಾಮನಗರ ಜಿಲ್ಲೆ ಕ್ರಿಶ್ಚಿಯನ್ಮಯವಾಗುತ್ತದೆ’ ಎಂದು ಎಚ್ಚರಿಸಿದರು.
‘ಡಿ.ಕೆ.ಶಿವಕುಮಾರ್ ಬಗ್ಗೆ ನನಗೆ ವೈಯಕ್ತಿಕ ದ್ವೇಷವಿಲ್ಲ. ಮುಸಲ್ಮಾನರು, ಕ್ರಿಶ್ಚಿಯನ್ನರು ನಮಗೆ ವಿರೋಧಿಗಳಲ್ಲ. ಆದರೆ ಈ ಜಾಗದಲ್ಲೇ ಏಕೆ ಯೇಸು ಪ್ರತಿಮೆಯನ್ನು ಮಾಡಬೇಕೆಂದುಹೇಳುತ್ತಾರೋ ಗೊತ್ತಿಲ್ಲ’ ಎಂದರು.
‘ಅವರು ಇರುವ ಕಡೆ ಬೇಕಾದ ರೀತಿಯಲ್ಲಿ ಮಾಡಿಕೊಳ್ಳಲಿ, ನಾನು ಇಲ್ಲಿ ಪ್ರತಿಮೆ ನಿರ್ಮಾಣ ಮಾಡಲು ಬಿಡುವುದಿಲ್ಲ. ಯಾರು ಬರಲಿ ಬಿಡಲಿ ನಾನು ಎದೆಗಾರಿಕೆಯಿಂದ ಹೋರಾಟ ಮಾಡುತ್ತೇನೆ’ ಎಂದು ತಿಳಿಸಿದರು. ಭಕ್ತರ ಜತೆ ಅವರು ಪ್ರತಿಮೆ ನಿರ್ಮಾಣದ ಜಾಗವನ್ನು ವೀಕ್ಷಿಸಿದರು.