ಮಾಗಡಿ: ‘ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಅಬಕಾರಿ ಉಪ ಅಧೀಕ್ಷಕ ಲಕ್ಷ್ಮೀನಾರಾಯಣ ಪಿ. ತಿಳಿಸಿದರು.
ಪಟ್ಟಣದ ಅಬಕಾರಿ ನಿರೀಕ್ಷಕರ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಸಿದ್ದ ಘೋರ 8 ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಮದ್ಯ, ಬಿಯರ್, ಸೇಂದಿ ನಾಶಪಡಿಸಿ ಅವರು ಮಾತನಾಡಿದರು.
ಕಳೆದ ಲೋಕಸಭಾ ಚುನಾವಣಾ ವೇಳೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ವಶಪಡಿಸಿಕೊಂಡಿದ್ದ 97.830 ಲೀಟರ್ ಮದ್ಯ, 700 ಲೀಟರ್ ಬಿಯರ್ ಹಾಗೂ 46 ಲೀಟರ್ ಸೇಂದಿ ನಾಶಪಡಿಸಲಾಯಿತು.
ತಹಶೀಲ್ದಾರ್ ಎನ್.ರಮೇಶ್ ಮಾತನಾಡಿ, ‘ಅಕ್ರಮ ಮದ್ಯಮಾರಾಟ ಕಂಡುಬಂದಲ್ಲಿ ಅಬಕಾರಿ ನಿರೀಕ್ಷಕರಿಗೆ ಲಿಖಿತ ದೂರು ನೀಡಲು ಜನತೆ ಮುಂದೆ ಬರಬೇಕು. ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕಿದೆ. ಪಟ್ಟಣದ ವೈನ್ ಸ್ಟೋರ್ಸ್ಗಳಲ್ಲಿ ತಡರಾತ್ರಿವರೆಗೆ ಮದ್ಯಮಾರಾಟ ಮಾಡುವುದು ಮತ್ತು ಮದ್ಯಮಾರಾಟ ಅಂಗಡಿಗಳ ಮುಂದೆ ರಸ್ತೆ ಮೇಲೆ ನಿಂತು ಮದ್ಯಪಾನ ಮಾಡುವುದರ ಬಗ್ಗೆ ಸಾರ್ವಜನಿಕರು ನಮ್ಮ ಗಮನಕ್ಕೆ ತಂದಿದ್ದಾರೆ. ಮದ್ಯಪಾನ ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಬಕಾರಿ ಮತ್ತು ಪೊಲೀಸರಿಗೆ ಸೂಚಿಸಲಾಗಿದೆ’ ಎಂದರು.
ರಾಜ್ಯ ಪಾನೀಯ ನಿಯಮ ನಿಯಮಿತದ ಜಂಟೀ ವ್ಯವಸ್ಥಾಪಕ ವಿ.ಹರಿಕೃಷ್ಣ ಮೂರ್ತಿ, ತಾಲ್ಲೂಕು ಅಬಕಾರಿ ನಿರೀಕ್ಷಕ ಶಿವು ಭಾವಿಕಟ್ಟಿ, ಉಪನಿರೀಕ್ಷಕ ನಾಗರಾಜು.ಎಚ್, ಶರಣಮ್ಮ ಆಡಿವೆಪ್ಪ ಭಜಂತ್ರಿ, ಮೋಹನ್ ಕುಮಾರ್.ಆರ್, ವಿಶ್ವನಾಥ್, ಸಿಬ್ಬಂದಿ ಇದ್ದರು.